ನವದೆಹಲಿ, ಜ.22: ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ನಡೆದಿದೆ ಎನ್ನಲಾದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣದ ಬಗ್ಗೆ ಹೊಸದಾಗಿ ಸ್ಥಾಪಿಸಲಾದ ಪ್ರತ್ಯೇಕ ಸಮಿತಿ ನಿರ್ಧರಿಸಲಿದೆ ಎಂದು ನ್ಯಾಯಪೀಠ ಘೋಷಿಸಿದೆ.
ಜಸ್ಟೀಸ್ ಟಿ.ಎಸ್ ಠಾಕೂರ್, ಎಫ್ ಎಂ ಐ ಕಾಲಿಫುಲ್ಲಾ ಅವರಿದ್ದ ನ್ಯಾಯಪೀಠ ಡಿ.17ರಂದು ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ಸುಪ್ರೀಂಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಆರ್ ಎಂ ಲೋಧಾ, ಅಶೋಕ್ ಭಾನ್ ಹಾಗೂ ಆರ್ ವಿ ರವೀಂದ್ರನ್ ಅವರು ಶಿಕ್ಷೆ ಪ್ರಮಾಣವನ್ನು ನಿರ್ಧರಿಸಲಿದ್ದಾರೆ. ಅಪರಾಧಿಗಳನ್ನು ಶಿಕ್ಷಿಸುವ ಅಧಿಕಾರ ಹೊಂದಿದ್ದ ಬಿಸಿಸಿಐಗೆ ಇದರಿಂದ ತೀವ್ರ ಮುಖಭಂಗವಾಗಿದೆ. [ಐಸಿಸಿ ಚೇರ್ಮನ್ ಆಗಿ ಎನ್ ಶ್ರೀನಿವಾಸನ್ ಆಯ್ಕೆ]
* 35 ಪುಟಗಳ ಮುದ್ಗಲ್ ವರದಿ ಆಧಾರವಾಗಿಟ್ಟುಕೊಂಡು 130 ಪುಟಗಳ ಆದೇಶ ಹೊರಡಿಸಿದ ಜಸ್ಟೀಸ್ ಟಿ.ಎಸ್ ಠಾಕೂರ್ ನ್ಯಾಯಪೀಠ.
* ಮುಂಬರುವ ಬಿಸಿಸಿಐ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್ ಶ್ರೀನಿವಾಸನ್ ಅವರು ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
* ಐಪಿಎಲ್ 2013ರಲ್ಲಿ ನಡೆದ ಬೆಟ್ಟಿಂಗ್ ನಲ್ಲಿ ಗುರುನಾಥ್ ಮೇಯಪ್ಪನ್ ಹಾಗೂ ರಾಜ್ ಕುಂದ್ರಾ ಇಬ್ಬರು ಭಾಗಿಯಾಗಿದ್ದರು.
* ಚೆನ್ನೈ ಸೂಪರ್ ಕಿಂಗ್ಸ್ ,ರಾಜಸ್ಥಾನ್ ರಾಯಲ್ಸ್ ತಂಡದ ಭವಿಷ್ಯ ನಿರ್ಧಾರ ಮೂವರು ಮಾಜಿ ಸಿಜೆಐಗಳ ಕೈಲಿದೆ.
* ಬಿಸಿಸಿಐ ಮುಂದಿನ 6 ವಾರಗಳಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕಿದೆ.
ತನಿಖಾ ಸಮಿತಿ: ಇದಕ್ಕೂ ಮುನ್ನ ಮುದ್ಗಲ್ ಸಮಿತಿಯ ತನಿಖಾ ಸಮಿತಿ ನೀಡಿದ್ದ 35 ಪುಟಗಳ ವರದಿ ವಿವರಗಳನ್ನು ಬಹಿರಂಗ ಪಡಿಸಲಾಗಿತ್ತು. ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ನೇತೃತ್ವದ ಮೂರು ಜನರಿದ್ದ ಸಮಿತಿ ಸುಪ್ರೀಂಕೋರ್ಟಿಗೆ ತನ್ನ ವರದಿಗೆ ನೀಡಿತ್ತು. ವರದಿಯಲ್ಲಿ ಗುರುನಾಥ್ ಮೇಯಪ್ಪನ್, ಸುಂದರರಾಮನ್, ಎನ್ ಶ್ರೀನಿವಾಸನ್ ಹಾಗೂ ರಾಜಸ್ಥಾನ ರಾಯಲ್ಸ್ ಮಾಲೀಕ ರಾಜ್ ಕುಂದ್ರಾ ಹೆಸರು ಉಲ್ಲೇಖಿಸಲಾಗಿತ್ತು.
2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ್ದರು. [ಶ್ರೀನಿವಾಸನ್, ಮೇಯಪ್ಪನ್, ಕುಂದ್ರಾ ಇನ್ ಟ್ರಬಲ್]
ನ.3ರಂದು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಕೋರ್ಟಿಗೆ ಸಲ್ಲಿಸಲಾಗಿತ್ತು. ನ.10ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ವರದಿಯಲ್ಲಿರುವ ಹೆಸರುಗಳನ್ನು ಬಹಿರಂಗಪಡಿಸುವಂತೆ ಕೋರ್ಟ್ ಸೂಚಿಸಿತ್ತು. ಅದರಂತೆ ನ.14ರಂದು ವರದಿಯಲ್ಲಿರುವ ಕೆಲ ಹೆಸರುಗಳನ್ನು ಬಹಿರಂಗಪಡಿಸಲಾಗಿತ್ತು. ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ ರನ್ನೊಳಗೊಂಡ 13 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.