ಕೌಂಟಾನ್, (ಮಲೇಷ್ಯಾ), ಅಕ್ಟೋಬರ್. 26: ಪುರುಷರ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ಚೀನಾ ತಂಡದ ವಿರುದ್ಧ ಗೋಲುಗಳ ಹೊಳೆಯನ್ನೇ ಹರಿಸಿದೆ.
ಕೌಂಟನ್ ಹಾಕಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಕ್ರಮಣಕಾರಿ ತಂತ್ರ ಮತ್ತು ರಕ್ಷಣಾ ವಿಭಾಗದಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ ಭಾರತ ಚೀನಾ ವಿರುದ್ಧ ಭರ್ಜರಿ 9-0 ಭಾರೀ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ನಾಯಕ ಪಿ.ಆರ್. ಶ್ರೀಜೇಶ್ ಅವರ ಅನುಪಸ್ಥಿತಿಯಲ್ಲೂ ಭಾರತ ಈ ಸಾಧನೆ ಮಾಡಿದೆ. [ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕಿಸ್ತಾನವನ್ನು ಸದೆಬಡಿದ ಭಾರತ]
ಆಕಾಶ್ ದೀಪ್ ಸಿಂಗ್, ಯೂಸುಫ್ ಅಫಾನ್ ಮತ್ತು ಜಸ್ ಜಿತ್ ಸಿಂಗ್ ಗೋಲುಗಳನ್ನು ಗಳಿಸಿ ಮಿಂಚಿದರು. ನಿಕಿನ್ ತಿಮ್ಮಯ್ಯ, ಲಲಿತ್ ಉಪಾಧ್ಯಾಯ ಕೂಡಾ ಗಮನ ಸೆಳೆದರು. ಭಾರತ ತಂಡದ ಪರ 9ನೇ ನಿಮಿಷದಲ್ಲಿ ಆಕಾಶ್ ದೀಪ್ ಗೋಲು ಖಾತೆ ತೆರೆದರು.
18ನೇ ನಿಮಿಷದಲ್ಲಿ ಆಕಾಶ್ ದೀಪ್ ಅವರು ಚೆಂಡಿನೊಡನೆ ಮುನ್ನುಗ್ಗಿ ಆಯಕಟ್ಟಿನ ಸ್ಥಳದಲ್ಲಿ ನಿಂತಿದ್ದ ಅಫಾನ್ ಅವರತ್ತ ತಳ್ಳಿದ ಚೆಂಡನ್ನು ಅಫಾನ್ ಗುರಿ ಮುಟ್ಟಿಸಿದರು. ಇದಾಗಿ 4ನೇ ನಿಮಿಷದಲ್ಲಿ ಜಸ್ ಜಿತ್ ಗೋಲು ಗಳಿಸಿದರು.
ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಭಾರತ ಚೆಂಡನ್ನು ಗುರಿ ಮುಟ್ಟಿಸಿತು. ಭಾರತ ಇಲ್ಲಿ ಆಡಿದ 4 ಪಂದ್ಯಗಳಿಂದ ಒಟ್ಟು 10 ಪಾಯಿಂಟ್ಸ್ ಗಳನ್ನು ಗಳಿಸಿ ಸೆಮೀಸ್ ಗೆ ಲಗ್ಗೆ ಇಟ್ಟಿತು.