ಚೆನ್ನೈ, ಅಕ್ಟೋಬರ್ 12: ಅಪಘಾತ ಹಾಗೂ ಬೆದರಿಕೆ ಪ್ರಕರಣದಲ್ಲಿ ಯುವಕನೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ಯಾರಾಲಂಪಿಕ್ ಚಿನ್ನದ ಪದಕ ವಿಜೇತ ಟಿ. ಮರಿಯಪ್ಪನ್ ವಿರುದ್ಧ ದೂರು ದಾಖಲಾಗಿದೆ.
ಲಾರಿ ಕ್ಲೀನರ್ ಆಗಿದ್ದ 19 ವರ್ಷದ ಸತೀಶ್ ಕುಮಾರ್ ಎಂಬ ಯುವಕನ ಮೃತ ದೇಹ ರೈಲ್ವೆ ಟ್ರ್ಯಾಕ್ ಮೇಲೆ ಜೂನ್ ತಿಂಗಳಲ್ಲಿ ಪತ್ತೆಯಾಗಿತ್ತು. ತಮ್ಮ ಮಗನ ದ್ವಿಚಕ್ರ ವಾಹನಕ್ಕೆ ಮರಿಯಪ್ಪನ್ ಅವರು ಕಾರು ಡಿಕ್ಕಿ ಹೊಡೆದಿದ್ದರಿಂದ ಅತ ಸಾವಿಗೀಡಾಗಿದ್ದಾನೆ ಎಂದು ಸತೀಶ್ ಅವರ ತಾಯಿ ಮುನಿಯಮ್ಮಲ್ ಆರೋಪಿಸಿದ್ದಾರೆ. ಈ ಕುರಿತಂತೆ ನೀಡಿರುವ ದೂರನ್ನು ಮದ್ರಾಸ್ ಹೈಕೋರ್ಟ್ ಮಾನ್ಯ ಮಾಡಿದೆ.
ಸೇಲಂ ಜಿಲ್ಲೆಯ ಕಡಯಂಪಟ್ಟಿ ತಾಲ್ಲೂಕಿನ ಎಂ.ಮುನಿಯಮ್ಮಲ್ ಎಂಬ ಮಹಿಳೆ ತಮ್ಮ ಮಗನ ಸಾವಿಗೆ ಮರಿಯಪ್ಪನ್ ಹಾಗೂ ಆತನ ಸ್ನೇಹಿತರು ಕಾರಣ, ನಮ್ಮ ಕುಟುಂಬಕ್ಕೂ ಅವರಿಂದ ಬೆದರಿಕೆ ಇದೆ ಎಂದು ನ್ಯಾಯಮೂರ್ತಿ ಎಂ.ಎಸ್.ರಮೇಶ್ ಅವರಿಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದಾರೆ.
ಈ ಕುರಿತಂತೆ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಲಯವು ಪ್ಯಾರಾಲಂಪಿಕ್ ಆಟಗಾರ ಮರಿಯಪ್ಪನ್ ಅವರನ್ನು ಪ್ರತಿವಾದಿಯನ್ನಾಗಿಸಿ ಅಕ್ಟೋಬರ್ 24ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಏನಿದು ಘಟನೆ?: ಸೇಲಂನ ಪೆರಿಯವಡಕಂಪಟ್ಟಿಗ್ರಾಮ ಸತೀಶ್ ಕುಮಾರ್ ಸಾವಿನ ಪ್ರಕರಣ ಮೊದಲಿಗೆ ರೈಲ್ವೆ ಪೊಲೀಸರು ದಾಖಲಿಸಿಕೊಂಡಿದ್ದರು. ನಂತರ ಇದು ರಸ್ತೆ ಅಪಘಾತದಿಂದ ಉಂಟಾದ ಸಾವು ಎಂದು ತಿಳಿದು ಬಂದಿದ್ದರಿಂದ ದೀವಾಟ್ಟಿಪಟ್ಟಿ ಪೊಲೀಸರು ಪ್ರಕರಣದ ತನಿಖೆ ನಡೆಸಿದರು.
ಮರಿಯಪ್ಪನ್ ಅವರ ಕಾರಿಗೆ ಜೂನ್ 03ರಂದು ಸತೀಶ್ ಸವಾರಿ ಮಾಡುತ್ತಿದ್ದ ಬೈಕು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕಾರು ಜಖಂಗೊಂಡಿದ್ದು ಹಣ ನೀಡುವಂತೆ ಸತೀಶ್ ಮೇಲೆ ಮರಿಯಪ್ಪನ್, ಯುವರಾಜ್ ಹಾಗೂ ಶಬರಿ ಕೂಗಾಡಿದ್ದಾರೆ. ಸತೀಶ್ ಬಳಿ ಇದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಅಲ್ಲಿಂದ ಸತೀಶ್ ಮನೆಗೆ ಓಡಿ ಹೋಗಿದ್ದಾನೆ.
ಮನೆ ತನಕ ಅಟ್ಟಿಸಿಕೊಂಡು ಬಂದಿದ್ದ ಮರಿಯಪ್ಪನ್ ಹಾಗೂ ಗೆಳೆಯರನ್ನು ಸತೀಶ್ ಅವರ ಪೋಷಕರು ಶಾಂತಿಗೊಳಿಸಿ ಮನೆಗೆ ಕಳಿಸಿದ್ದರು. ನಂತರ ಮರಿಯಪ್ಪನ್ ಮನೆಗೆ ಹೋಗಿ ಮೊಬೈಲ್ ಪಡೆದುಕೊಂಡು ಹಿಂತಿರುಗಿದ್ದ ಸತೀಶ್ ನಂತರ ಶವವಾಗಿ ಪತ್ತೆಯಾಗಿದ್ದರು.