ಬೆಂಬಲಿಗರ ಮಾರಾಮಾರಿ, ಕುಸ್ತಿಪಟು ಸುಶೀಲ್, ರಾಣಾ ವಿರುದ್ಧ ದೂರು
ನವದೆಹಲಿ, ಡಿಸೆಂಬರ್ 30 :ಮುಂದಿನ ವರ್ಷ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ ನ ಕುಸ್ತಿ ಸ್ಪರ್ಧೆಗೆ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇಬ್ಬರು ಕುಸ್ತಿಪಟುಗಳ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ.
ನವದೆಹಲಿಯಲ್ಲಿರುವ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾಮನ್ವೆಲ್ತ್ ಗೇಮ್ಸ್ ಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಈ ವೇಳೆ 74 ಕೆಜಿ ವಿಭಾಗದ ಸೆಮಿಫೈನಲ್ ಬೌಟ್ ನಲ್ಲಿ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದಿರುವ ಸುಶೀಲ್ ಕುಮಾರ್ ಅವರು ಪ್ರವೀಣ್ ರಾಣಾ ವಿರುದ್ಧ ಜಯ ಗಳಿಸಿದ್ದರು. ಇದರ ಬೆನ್ನಲ್ಲೇ ಇಬ್ಬರ ಬೆಂಬಲಿಗರು ಕೈ ಕೈ ಮಿಲಾಯಿಸಿದ್ದಾರೆ.
ಸಂಘರ್ಷದ ವೇಳೆ ಸುಶೀಲ್ ಕುಮಾರ್ ತಲೆಗೆ ಪ್ರವೀಣ್ ರಾಣಾ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ರಾಣಾ ಅಣ್ಣ, ಬೆಂಬಲಿಗರು ಮತ್ತು ಸುಶೀಲ್ ಕುಮಾರ್ ಬೆಂಬಲಿಗರ ನಡುವಿನ ಜಗಳ ತಾರಕಕ್ಕೇರಿದ್ದು, ಒಬ್ಬರಿಗೊಬ್ಬರು ಹೊಡೆದಾಡಿಕೊಂಡರು.
ಈ ಬಗ್ಗೆ ಸೆಂಟ್ರಲ್ ಡಿಸಿಪಿ ಎಂಎಸ್ ರಾಂಧವ ಅವರು ಕುಷ್ತಿಪಟುಗಲಾದ ಸುಶೀಲ್ ಕುಮಾರ್, ಪ್ರವೀಣ್ ರಾಣಾ ಹಾಗೂ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 323 ಮತ್ತು 341ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.