ಮೆಲ್ಬೋರ್ನ್, ಜ.26: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಕೊನೆಗೂ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಬಾಯ್ಬಿಟ್ಟಿದ್ದಾರೆ. ಈ ಕಳ್ಳಾಟದಲ್ಲಿ ತಮ್ಮ ಹೆಸರು ಸೇರಿಕೊಂಡಿದ್ದಕ್ಕೆ ಅಸಮಾಧಾನವಾಗಿದೆ ಎಂದಿದ್ದಾರೆ.
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ ತಂಡ ಸ್ಪಾಟ್ ಫಿಕ್ಸಿಂಗ್ ಸುಳಿಯಲ್ಲಿ ಸಿಲುಕಿಕೊಂಡ ನಂತರ ಪ್ರಕರಣದಲ್ಲಿ ಧೋನಿಯವರ ಹೆಸರು ಕೇಳಿಬಂದಿತ್ತು. ಆದರೆ, ಈ ಬಗ್ಗೆ ಇದುವರೆಗೂ ಧೋನಿ ಚಕಾರೆ ಎತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಭಾನುವಾರ ಮಾತನಾಡಿ ವಿನಾಕಾರಣ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಗಿದೆ ಎಂದಿದ್ದಾರೆ.[ಶ್ರೀನಿಗೆ ಸುಪ್ರೀಂ ಕೋರ್ಟ್ ತಪರಾಕಿ]
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಕುರಿತಂತೆ ತನಿಖೆ ನಡೆಸಿದ ಮುಕುಲ್ ಮುದ್ಗಲ್ ಸಮಿತಿ ಬೆಟ್ಟಿಂಗ್ನಲ್ಲಿ ಪಾಲ್ಗೊಂಡ 13 ಆಟಗಾರರ ಹೆಸರನ್ನು ಕಳೆದ ವರ್ಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಕಳಂಕಿತ ಆಟಗಾರರ ಪೈಕಿ ಧೋನಿಯವರ ಹೆಸರು ಇದೆ ಎಂಬ ಊಹಾಪೋಹಗಳು ಕೇಳಿಬಂದಿತ್ತು.
ಅದರೆ, ಕಳೆದ ವಾರ ಸುಪ್ರೀಂಕೋರ್ಟ್ ಕೊಟ್ಟ ತೀರ್ಪಿನಲ್ಲಿ ಸಿಎಸ್ ಕೆ ತಂಡದ ಮೇಯಪ್ಪನ್, ರಾಜಸ್ಥಾನ ತಂಡ ರಾಜ್ ಕುಂದ್ರಾ ಹಾಗೂ ಅಧಿಕಾರಿ ಸುಂದರ್ ರಾಮನ್ ಹೆಸರು ಮಾತ್ರ ಕೇಳಿ ಬಂತು. ಜೊತೆಗೆ ಐಸಿಸಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರಿಗೆ ನಿರ್ಬಂಧ ಹೇರಿಕೆ, ಪ್ರತ್ಯೇಕ ಸಮಿತಿಯಿಂದ ಶಿಕ್ಷೆ ಪ್ರಮಾಣ ನಿರ್ಧಾರ ಎಂದು ಹೇಳಲಾಗಿತ್ತು. [ಐಸಿಸಿ ಚೇರ್ಮನ್ ಆಗಿ ಎನ್ ಶ್ರೀನಿವಾಸನ್ ಆಯ್ಕೆ]
ಇದಾದ ಬೆನ್ನಲ್ಲೇ ಧೋನಿ ಮಾತನಾಡಿ ನನ್ನ ವಿರುದ್ಧ ಎಂತಹ ಆರೋಪ ಕೇಳಿಬಂದರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ಕೆಲಸದ ಮೇಲೆ ಗಮನಹರಿಸುತ್ತೇನೆ. ಆದರೆ ಇತ್ತೀಚೆಗೆ ಕೆಲವರು ನನ್ನ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇಂತಹ ವರ್ತನೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಬೆಟ್ಟಿಂಗ್ ಪ್ರಕರಣದಲ್ಲಿ ಗುರುನಾಥ್ ಮೇಯಪ್ಪನ್, ರಾಜ್ ಕುಂದ್ರ ಅವರನ್ನು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿರುವ ಹಾಗೂ ಬಿಸಿಸಿಐ ಚುನಾವಣೆಯಲ್ಲಿ ಸ್ಪರ್ಧಿಸದಿರುವಂತೆ ಶ್ರೀನಿವಾಸನ್ ಅವರಿಗೆ ಕೋರ್ಟ್ ಸೂಚಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಲು ಧೋನಿ ನಿರಾಕರಿಸಿದರು. (ಪಿಟಿಐ)