ಮುಂಬೈ, ಡಿಸೆಂಬರ್ 04: ಗಾಯಾಳುವಾಗಿರುವ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಇನ್ನೂ ಗುಣಮುಖರಾಗದ ಕಾರಣ ಇಂಗ್ಲೆಂಡ್ ವಿರುದ್ಧದ ಮುಂಬೈ ಟೆಸ್ಟಿಗೆ ಅಲಭ್ಯರಾಗಿದ್ದಾರೆ. ಸಹಾ ಬದಲಿಗೆ ಪಾರ್ಥೀವ್ ಪಟೇಲ್ ಅವರು ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಎಡ ತೊಡೆ ಸ್ನಾಯು ಸೆಳೆತಕ್ಕೆ ಸಿಲುಕಿರುವ ವೃದ್ಧಿಮಾನ್ ಸಹಾ ಬದಲಿಗೆ ಮೊಹಾಲಿ ಟೆಸ್ಟ್ ಪಂದ್ಯವಾಡಿದ್ದ ಪಾರ್ಥೀವ್ ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಹೀಗಾಗಿ, ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡದೆ ಪಾರ್ಥೀವ್ ಅವರನ್ನು ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.
ಇಶಾಂತ್ ಗೆ ಬಿಡುಗಡೆ: ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ವೇಗಿ ಇಶಾಂತ್ ಶರ್ಮ ಅವರು ಗುಣಮುಖರಾಗಿದ್ದರೂ ತಂಡ ಸೇರುತ್ತಿಲ್ಲ. ಇಶಾಂತ್ ಅವರು ಮದುವೆಯಾಗುತ್ತಿರುವುದರಿಂದ ತಂಡದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ 14 ಮಂದಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಸಾಧ್ಯವಿಲ್ಲ.
ಈ ನಡುವೆ ಕೆಎಲ್ ರಾಹುಲ್ ಅವರ ಗಾಯದ ಸಮಸ್ಯೆ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ಪಂದ್ಯದ ವೇಳೆ ಗುಣಮುಖರಾದರೆ, ರಾಹುಲ್ ಅವರು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದು, ಪಾರ್ಥೀವ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ರಾಹುಲ್ ಅವರು ಎಂಟ್ರಿಕೊಟ್ಟರೆ ಮಧ್ಯಮ ಕ್ರಮಾಂಕದಿಂದ ಕರ್ನಾಟಕ ಮತ್ತೊಬ್ಬ ಆಟಗಾರ ಕರುಣ್ ನಾಯರ್ ಅವರು ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯ
ರಿಸ್ಥಿತಿ ಇದೆ
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನಾಲ್ಕನೇ ಟೆಸ್ಟ್ ಪಂದ್ಯ ಮುಂಬೈನಲ್ಲಿ ಡಿಸೆಂಬರ್ 8ರಂದು ಆರಂಭವಾಗಲಿದೆ (ಒನ್ಇಂಡಿಯಾ ಸುದ್ದಿ)