ರೋಹ್ಟಕ್, ಜುಲೈ 17: 2007ರ ವಿಶ್ವ ಟಿ20 ಟೂರ್ನಮೆಂಟ್ ನ ಹೀರೋ ಜೋಗಿಂದರ್ ಶರ್ಮಾ ತಂದೆ ಓಂ ಪ್ರಕಾಶ್ ಶರ್ಮಾ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಲೂಟಿ ಮಾಡಿದ ಘಟನೆ ನಡೆದಿದೆ.
68 ವರ್ಷದ ಓಂ ಪ್ರಕಾಶ್ ಅವರು ಸ್ವೀಟ್ಸ್ ಅಂಗಡಿ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಇಬ್ಬರು ಯುವಕರು ಹಲ್ಲೆ ಮಾಡಿದ್ದಾರೆ. ಅಂಗಡಿಗೆ ಬಂದು ಸಿಗರೇಟ್ ಹಾಗೂ ಕೂಲ್ ಡ್ರಿಂಕ್ಸ್ ತೆಗೆದುಕೊಂಡ ಯುವಕರಿಬ್ಬರು ನಂತರ ಏಕಾಏಕಿ ಅಂಗಡಿಯೊಳಗೆ ನುಗ್ಗಿ ಓಂ ಪ್ರಕಾಶ್ ಅವರ ಜೇಬಿಗೆ ಕೈ ಹಾಕಿ ಹಣ ಕಸಿಯಲು ಯತ್ನಿಸಿದ್ದಾರೆ.
ಇದಕ್ಕೆ ಅಡ್ಡಿಪಡಿಸಿದ ಓಂ ಪ್ರಕಾಶ್ ಅವರ ಮೇಲೆ ಒಬ್ಬ ಯುವಕರ ಹಲ್ಲೆ ಮಾಡಿದ್ದಾನೆ. ಚಾಕು ತೋರಿಸಿ ಬೆದರಿಸಿದ್ದಾನೆ. ಮತ್ತೊಬ್ಬ ಇದೇ ವೇಳೆ ಗಲ್ಲಾ ಪೆಟ್ಟಿಗೆಯಲ್ಲಿದ್ದ 7 ಸಾವಿರ ರೂಪಾಯಿ ಕಸಿದುಕೊಂಡು ಬಂದಿದ್ದಾನೆ. ಓಂ ಪ್ರಕಾಶ್ ರನ್ನು ಅಂಗಡಿಯಲ್ಲಿ ಕೂಡಿ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಓಂ ಪ್ರಕಾಶ್ ಅವರು ತಮ್ಮ ಪುತ್ರ ದಿನೇಶ್ ಗೆ ಕರೆ ಮಾಡಿದ್ದಾರೆ. ತಕ್ಷಣವೇ ಅಂಗಡಿಗೆ ಬಂದ ದಿನೇಶ್, ಅಪ್ಪನನ್ನು ಅಲ್ಲಿಂದ ಕರೆದೊಯ್ದು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಘಟನೆಯ ವಿವರ ಪಡೆದುಕೊಂಡಿರುವ ಸ್ಥಳೀಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
2007ರ ವಿಶ್ವಟಿ20 ಫೈನಲ್ ನಲ್ಲಿ ಕೊನೆ ಓವರ್ ಎಸೆದಿದ್ದ ಜೋಗಿಂದರ್ ಶರ್ಮ ಅವರು ಅಂತಿಮವಾಗಿ ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದು ಭಾರತಕ್ಕೆ ಅಮೋಘ ಜಯ ತಂದಿತ್ತಿದ್ದರು. ಸದ್ಯ ಹಿಸ್ಸಾರ್ ನಲ್ಲಿ ಡಿಎಸ್ ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.