ಬೆಂಗಳೂರು, ಮೇ 31: ಟೀಂ ಇಂಡಿಯಾದ ಹಿರಿಯ ಆಟಗಾರರು ಮುಖ್ಯ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ದೂರು ನೀಡಿರುವ ಸುದ್ದಿಗೆ ಮತ್ತಷ್ಟು ಪೂರಕ ಮಾಹಿತಿ ಸಿಕ್ಕಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವಿನ ಕಲಹ ನಿನ್ನೆ ಮೊನ್ನೆಯದ್ದಲ್ಲ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಉದ್ಘಾಟನಾ ಟೂರ್ನಮೆಂಟ್ ನ ಮೊದಲ ಪಂದ್ಯದಿಂದಲೇ ವಿರಸ ಆರಂಭವಾಗಿರುವ ಸುದ್ದಿ ಸಿಕ್ಕಿದೆ.
ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವಿನ ವಿರಸ ಕಂಡು ನನಗೇನೂ ಅಚ್ಚರಿಯಾಗುತ್ತಿಲ್ಲ. ಇಬ್ಬರು ತಮ್ಮ ವಾದ ಮಂಡಿಸುವಲ್ಲಿ, ಬೇಕಾದ್ದು ಪಡೆಯುವಲ್ಲಿ ಹಠಮಾರಿತನ ತೋರುತ್ತಾರೆ.ಇದನ್ನು ನಾನು ಐಪಿಎಲ್ ಆರಂಭದಲ್ಲೇ ಕಂಡಿದ್ದೇನೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಕೋಚ್ ದಕ್ಷಿಣ ಆಫ್ರಿಕಾದ ರೇ ಜೆನ್ನಿಂಗ್ಸ್ ಹೇಳಿದ್ದಾರೆ.[ಅನಿಲ್ ಕುಂಬ್ಳೆ ವಿರುದ್ಧ ಟೀಂ ಇಂಡಿಯಾ ಆಟಗಾರರ ದೂರು]
ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡುತ್ತಾ, ನಾಯಕ ಹಾಗೂ ಕೋಚ್ ನಡುವಿನ ಹೊಂದಾಣಿಕೆ ಅತಿ ಮುಖ್ಯ, ಟೀಂ ಇಂಡಿಯಾದಲ್ಲಿ ಇಬ್ಬರ ನಡುವಿನ ಈ ರೀತಿ ಕಲಹವಿದ್ದರೂ ತಂಡ ಉತ್ತಮ ಫಲಿತಾಂಶ ಹೊರ ಹಾಕಿರುವುದು ಅಚ್ಚರಿಯ ಅಂಶ. ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕರಾದಾಗಿನಿಂದಲೂ ಮಾಜಿ ನಾಯಕ ರವಿಶಾಸ್ತ್ರಿ ಅವರು ಕೋಚ್ ಆಗಲಿ ಎಂದು ಬಯಸಿದ್ದರು. ಅವರಿಬ್ಬರ ನಡುವೆ ಉತ್ತಮ ಸಂವಹನವಿತ್ತು.