ನವದೆಹಲಿ, ಮಾರ್ಚ್. 12 : ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಹಂತದಲ್ಲಿ ಅಮೋಘ ಆಟದ ಮೂಲಕ ಕ್ವಾರ್ಟರ್ ಫೈನಲ್ ಗೆ ಪ್ರವೇಶಸಿದ್ದ ಕರ್ನಾಟಕ ತಂಡವನ್ನು ಬರೋಡ 7 ವಿಕೆಟ್ ಗಳಿಂದ ಮಣಿಸಿತು.
ಭಾನುವಾರ ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ 48.5 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 233 ರನ್ ಗಳಿಸಲಷ್ಟೇ ಶಕ್ತವಾಯಿತು.
ಕರ್ನಾಟಕ ಪರ ಮಯಾಂಕ್ ಅಗರವಾಲ್ 40, ಸಮರ್ಥ್ 44 ಮತ್ತು ಪವನ್ ದೇಶಪಾಂಡೆ 54 ರನ್ ಗಳಿಸಿದರು. ಬರೋಡ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಕುರ್ನಾಲ್ ಪಾಂಡ್ಯಾ 6 ಓವರ್ ಗಳಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಕರ್ನಾಟಕ ಸ್ಕೋರ್ ಗೆ ಕಡಿವಾಣ ಹಾಕಿದರು.
ಸುಲಭ ಗುರಿ ಬೆನ್ನಟ್ಟಿದ ಬರೋಡ 45.5 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 234 ರನ್ ಗಳಿಸಿ 7 ವಿಕೆಟ್ ಗಳಿಂದ ಭರ್ಜರಿ ಜಯಗಳಿಸಿತು.
ಬರೋಡ ಪರ ಕೇದಾರ್ ದೇವಧರ(78) ಮತ್ತು ಕುರ್ನಾಲ್ ಪಾಂಡ್ಯಾ 70 ರನ್ ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ತಂದು ವಿಕೆಟ್ ಒಪ್ಪಿಸಿದರು.
ಬಳಿಕ ಬ್ಯಾಟಿಂಗ್ ಗೆ ಬಂದ ಅನುಭವಿ ಆಟಗಾರ ಯೂಸಫ್ ಪಠಾಣ್ 11 ಹಾಗೂ ದೀಪಕ್ ಹುಡಾ 33 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಬರೋಡ ಬ್ಯಾಟ್ಸ್ ಮನ್ ಗಳ ಎದುರು ಕರ್ನಾಟಕ ಬೌಲರ್ ಆಟ ನಡೆಯಲಿಲ್ಲ.
ಅರವಿಂದ್ ಶ್ರೀನಾಥ್ 2 ಸುಜೀತ್ 1 ವಿಕೆಟ್ ಕಬಳಿಸಿದನ್ನು ಬಿಟ್ಟರೆ ಇನ್ನುಳಿದ ಬೌಲರ್ ಗಳು ದುಬಾರಿಯಾದರು.