ಅದು, 2014ರ ಅಂತ್ಯ ಕಾಲ. ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆಗ ತಂಡದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ, ಉಭಯ ದೇಶಗಳ ಟೆಸ್ಟ್ ಸರಣಿ ಮುಗಿಯುವ ಮುನ್ನವೇ ತನ್ನ ನಾಯಕತ್ವ ಸ್ಥಾನಕ್ಕೆ ವಿದಾಯ ಹೇಳಿಬಿಟ್ಟರು. ಕಾರಣ... ವಿರಾಟ್ ಕೊಹ್ಲಿ.
ಇದೇ ವರ್ಷ ಜನವರಿ. ಭಾರತೀಯ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ತಂಡದ ನಾಯಕತ್ವಕ್ಕೂ ಧೋನಿ, ಇದ್ದಕ್ಕಿದ್ದಂತೆ ವಿದಾಯ ಹೇಳಿದರು. ಇದಕ್ಕೂ ಕಾರಣ.... ವಿರಾಟ್ ಕೊಹ್ಲಿ.
ಈಗ 2017ರ ಮಧ್ಯಭಾಗ. ಭಾರತ ತಂಡದ ಮುಖ್ಯ ಕೋಚ್ ಆಗಿದ್ದ, ಕರ್ನಾಟಕದ ಮಾಜಿ ಆಟಗಾರ ಅನಿಲ್ ಕುಂಬ್ಳೆ, ಇದ್ದಕ್ಕಿದ್ದಂತೆ ತಮ್ಮ ಕೋಚ್ ಹುದ್ದೆಗೆ ವಿದಾಯ ಹೇಳಿದರು. ಇದಕ್ಕೂ ಕಾರಣ... ಒನ್ಸ್ ಎಗೇನ್.... ವಿರಾಟ್ ಕೊಹ್ಲಿ.
ಇಲ್ಲಿ ಪದೇ ಪದೇ ವಿರಾಟ್ ಕೊಹ್ಲಿ ಹೆಸರು ಪ್ರಸ್ತಾಪವಾಗುತ್ತಿರುವುದು ಅವರ ಮೇಲೆ ಗೂಬೆ ಕೂರಿಸಲೆಂದಲ್ಲ ಅಥವಾ ಅವರ ವಿರುದ್ಧ ಅಪಪ್ರಚಾರ ಮಾಡಬೇಕೆಂದಲ್ಲ. ಇದು ಜಗತ್ತಿಗೇ ಗೊತ್ತಿರುವ ವಿಚಾರ.
ಧೋನಿ ಮತ್ತು ಕೊಹ್ಲಿ ನಡುವೆ ಎಂಥದ್ದೊಂದು ಕಂದಕ ಸೃಷ್ಟಿಯಾಗಿತ್ತೆಂದು ಹೇಳಲಾಗುತ್ತಿತ್ತೋ ಪ್ರಾಯಶಃ ಅದಕ್ಕಿಂತ ದೊಡ್ಡ ಮಟ್ಟದ ಕಂದಕವು ಕುಂಬ್ಳೆ ಕೊಹ್ಲಿ ನಡುವೆಯೂ ಉಂಟಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.
ಹೀಗೆ, ಘಟಾನುಘಟಿಗಳನ್ನು ತಂಡದ ಪ್ರಮುಖ ಹುದ್ದೆಗಳಲ್ಲಿ ಉಳಿಸಿಕೊಳ್ಳದ ಕೊಹ್ಲಿಯ ಪ್ರಾಬ್ಲಂ ಏನು? ಇದಕ್ಕೆ ಉತ್ತರ - ಸೈದ್ಧಾಂತಿಕ ಭಿನ್ನಾಭಿಪ್ರಾಯ.
ತಂಡವನ್ನು ಒಗ್ಗೂಡಿಸುವಿಕೆಯಿಂದ ಹಿಡಿದು, ತಂಡದ ಬ್ಯಾಟಿಂಗ್ ಕ್ರಮಾಂಕದಿಂದ ಹಿಡಿದು ಎಲ್ಲದರಲ್ಲೂ ಕೊಹ್ಲಿಯದ್ದು ಹಾಗೂ ಧೋನಿಯದ್ದೂ ತದ್ವಿರುದ್ಧ ಯೋಜನೆಗಳು. ಈ ಬಗ್ಗೆ ಹೆಚ್ಚಿಗೆ ಹೇಳೋದು ಬೇಕಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಆದರೆ, ವಿಷಯ ಅದಲ್ಲ. ಕೊಹ್ಲಿಯ ಹಸಿಬಿಸಿ ಆಲೋಚನೆಗಳಿಗೆ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಆಡಳಿತ ಮಂಡಳಿ ಕೊಡುತ್ತಿರುವ ಬೆಲೆಯನ್ನು ಹಿರಿಯ ಅಥವಾ ಮಾಜಿ ಆಟಗಾರರಿಗೆ ನೀಡುತ್ತಿಲ್ಲ ಎಂಬುದು ಅಷ್ಟೇ ಸತ್ಯ. ಕೊಹ್ಲಿಯದ್ದು ಬಿಸಿರಕ್ತವಿರಬಹುದು. ಆದರೆ, ಅಲ್ಲಿ ಆಡಳಿತ ಮಂಡಳಿಯಲ್ಲಿರುವರಿಗಾದರೂ ಕೊಂಚ ತಾಳ್ಮೆ ಇಲ್ಲವೆ?
ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾಗಿದ್ದ ಕುಂಬ್ಳೆಯವರ ಸಾಧನೆಯೇನು ಕಮ್ಮಿಯೇ. ಅದನ್ನು ಪರಿಗಣಿಸಿಯೇ ತಾನೇ ಅವರನ್ನು ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದ್ದು?
ತಮ್ಮ ವೃತ್ತಿಜೀವನದ ಸಾಧನೆಯನ್ನು ಮಾನದಂಡವಾಗಿಸಿಕೊಂಡು ಕೋಚ್ ಹುದ್ದೆಗೆ ಬಂದಿದ್ದ ಕುಂಬ್ಳೆಯಿಂದ ಟೀಂ ಇಂಡಿಯಾ ಪ್ರಯೋಜನ ಪಡೆದಿದೆ.
ಕುಂಬ್ಳೆ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಕೂಡಲೇ ವೆಸ್ಟ್ ಇಂಡೀಸ್ ಟೂರ್ ಮಾಡಿದ ಟೀಂ ಇಂಡಿಯಾ, ಅಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. ಆನಂತರ, ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಯ, ಬಾಂಗ್ಲಾದೇಶ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಳಲ್ಲೂ ವಿಜಯ ದುಂದುಭಿ.
ಒಟ್ಟಾರೆಯಾಗಿ ಹೇಳಬೇಕೆಂದರೆ, ಕುಂಬ್ಳೆ ಅವರು ಟೀಂ ಇಂಡಿಯಾ ಕೋಚ್ ಆದಾಗಿನಿಂದ ಈವರೆಗೆ ಆಡಿರುವ ಐದು ಟೆಸ್ಟ್ ಸರಣಿಯಲ್ಲಿ ಒಂದನ್ನೂ ಸೋತಿಲ್ಲ. ಮೂರು ಏಕದಿನ ಸರಣಿಗಳಲ್ಲಿ ಎರಡರಲ್ಲಿ ಜಯ ಸಾಧಿಸಿದೆ. ಇನ್ನು, ಎರಡು ಟಿ20 ಸರಣಿಗಳಲ್ಲಿ ಒಂದನ್ನು ಗೆದ್ದಿದೆ. ಈ ಸಾಧನೆಯೇನು ಕಡಿಮೆಯೇ?
ಇಷ್ಟೆಲ್ಲಾ ವಿಚಾರಗಳಿರುವಾಗ ಯಕಶ್ಚಿತ್ ಕೊಹ್ಲಿಯ ಅಸಮಾಧಾನ ತಿದ್ದಲು ಬಿಸಿಸಿಐಗೆ ಸಾಧ್ಯವಾಗಲಿಲ್ಲವೇ? ಕೊಹ್ಲಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಬಿಸಿಸಿಐ, ಅದೆಷ್ಟು ಪ್ರತಿಭಾವಂತರ ವಿಶ್ವಾಸವನ್ನು ಕಳೆದುಕೊಳ್ಳಲಿದೆಯೋ ಆ ದೇವರಿಗೇ ಗೊತ್ತು.
ಹಾಗಿದ್ದರೂ, ಅನಿಲ್ ಕುಂಬ್ಳೆಯವರನ್ನು ವಿರಾಟ್ ಕೊಹ್ಲಿಯಾಗಲೀ, ಬಿಸಿಸಿಐ ಆಗಲೀ ನಡೆಸಿಕೊಂಡ ರೀತಿ ಸರಿಯೇ? ಖಂಡಿತಾ ಇಲ್ಲ. ಕುಂಬ್ಳೆಯವರು ಕೋಚ್ ಹುದ್ದೆಯಿಂದ ಇಳಿದ ಕೂಡಲೇ ಕ್ರಿಕೆಟ್ ಪರಿವಾರದಿಂದ ಸಾಕಷ್ಟು ಅಸಮಾಧಾನಗಳು ಹೊರಬೀಳುತ್ತಿವೆ.
Organisations must strive to preserve committed people. I will be disappointed if there isn't a bigger role for @anilkumble1074
— Harsha Bhogle (@bhogleharsha) June 20, 2017
ಕುಂಬ್ಳೆ ಕೋಚ್ ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ, ಖ್ಯಾತ ವೀಕ್ಷಕ ವಿವರಣೆಗಾರ ಹಾಗೂ ಬಿಸಿಸಿಐನ ಒಳ ರಾಜಕೀಯವನ್ನು ಚೆನ್ನಾಗಿ ಬಲ್ಲ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದು ಕೆಲ ಸಂಸ್ಥೆಗಳು ಸಮರ್ಪಣಾಭಾವದಿಂದ ಸೇವೆ ಮಾಡುವ ಕೆಲಸಗಾರರನ್ನು ಉಳಿಸಿಕೊಳ್ಳಲು ಶ್ರಮಿಸಬೇಕು. ಕುಂಬ್ಳೆಗೆ ಮುಂದೆಯೂ ಒಳ್ಳೆ ಗೌರವ ಸಿಗದೇ ಹೋದರೆ ಅದಕ್ಕಿಂತ ಮತ್ತೊಂದು ಅಸಮಾಧಾನ ಇನ್ನೊಂದು ಇರಲಾರದು ಎಂದು ಹೇಳಿರುವುದು ಕುಂಬ್ಳೆಗಾದ ಅಪಮಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
Virat Kohli should learn to respect legendary players like Anil Kumble. Feeling sad for Anil Sir to step out as a coach in this way.😢
— Varad Chakrapani (@ChakrapaniVarad) June 20, 2017
ಇದರ ಜತೆಯಲ್ಲೇ ಕೊಹ್ಲಿ ವಿರುದ್ಧ ಕೆಲವಾರು ಕ್ರಿಕೆಟ್ ಪ್ರಿಯರು ಟ್ವಿಟರ್ ನಲ್ಲಿ ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ಕೊಹ್ಲಿ ಇನ್ನಾದರೂ ಹಿರಿಯ ಆಟಗಾರಿಗೆ ಮರ್ಯಾದೆ ಕೊಡುವುದನ್ನು ಕಲಿಯಲಿ ಎಂದಿದ್ದಾರೆ.
The corruption in BCCI has another victim- Anil Kumble. Long live bcci long live corruption. #bcci #Anilkumble
— Virat Tomar (@Virattomar1) June 20, 2017