ಬೆಂಗಳೂರು, ಡಿ. 21: ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಲು ಆಯ್ಕೆಯಾಗಿರುವ ಭಾರತೀಯ ಆಟಗಾರರ ಪೈಕಿ ಪಂಜಾಬಿ ಯುವ ವೇಗಿ ಬರೀಂದರ್ ಸರಣ್ ಹೊಸ ಮುಖ ಎನಿಸಿದ್ದಾರೆ. ಹಲವರಿಗೆ ಬರೀಂದರ್ ಆಯ್ಕೆ ಅಚ್ಚರಿ ಮೂಡಿಸಿದೆ. ಏಕದಿನ ಕ್ರಿಕೆಟ್ ತಂಡಕ್ಕೆ ಸರಣ್ ಆಯ್ಕೆಯಾಗಲು ಇಲ್ಲಿದೆ ಕಾರಣ.
ಮುಂದಿನ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯ ಪ್ರವಾಸ ಆರಂಭಗೊಳ್ಳಲಿದ್ದು, ಇದಕ್ಕಾಗಿ ಪಂಜಾಬ್ನ ಎಡಗೈ ವೇಗದ ಬೌಲರ್ 23ವರ್ಷ ವಯಸ್ಸಿನ ಬರೀಂದರ್ ಸರಣ್ರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲು ಮುಖ್ಯ ಕಾರಣ ಸತತವಾಗಿ ಉತ್ತಮ ಪ್ರದರ್ಶನ ನೀಡಿ, ಆಯ್ಕೆದಾರರ ಗಮನ ಸೆಳೆದಿದ್ದೇ ಆಗಿದೆ. [ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಗೆ ತಂಡ ಪ್ರಕಟ]
ಸರಣ್ ಅವರು 2011ರಲ್ಲಿ ಒಡಿಶಾ ವಿರುದ್ಧ ಪಂಜಾಬ್ನ ಪರ ಚೊಚ್ಚಲ ಪಂದ್ಯ ಆಡಿದ ನಂತರ 11 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. 34.06ರ ಸರಾಸರಿಯಲ್ಲಿ ಒಟ್ಟು 32 ವಿಕೆಟ್ಗಳನ್ನು ಕಬಳಿಸಿದ್ದಾರೆ. ಏಳು ಲೀಸ್ಟ್ 'ಎ' ಪಂದ್ಯಗಳಲ್ಲಿ 15 ವಿಕೆಟ್ಗಳನ್ನು ಪಡೆದಿದ್ದಾರೆ.
2010ರಲ್ಲಿ ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಡೆಸಿದ್ದ ಪ್ರತಿಭಾನ್ವೇಷಣೆಯಲ್ಲಿ ಸರಣ್ ಪಾಲ್ಗೊಂಡಿದ್ದರು. ಅಲ್ಲಿ ತನ್ನ ಶಾರ್ಪ್ ಸ್ವಿಂಗ್ ಹಾಗೂ ಅತ್ಯಂತ ವೇಗದ ಬೌಲಿಂಗ್ನ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. [ವಿಶ್ವ ಟಿ 20 ಆಡುವ ತಂಡಕ್ಕೆ ಸುನೀಲ್ ಜೋಶಿ ಕೋಚ್]
* ಜನನ: ಡಿಸೆಂಬರ್ 10, 1992, ಸಿರ್ಸಾ, ಹರ್ಯಾಣ
* ರಣಜಿ ಮೊದಲ ಪಂದ್ಯ: ನವೆಂಬರ್ 2011ರಲ್ಲಿ ಮೊದಲ ಪಂದ್ಯವಾಡಿದ್ದು, ನಾಲ್ಕು ತಿಂಗಳ ನಂತರ ಎ ಲಿಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡರು.
* ಪ್ರಸ್ತುತ ನಡೆಯುತ್ತಿರುವ ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸರಣ್ ಆಡಿರುವ 6 ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಕಬಳಿಸಿದ್ದರು. ಈ ಸಾಧನೆಯೇ ಸರಣ್ಗೆ ಟೀಮ್ ಇಂಡಿಯಾದ ಏಕದಿನ ತಂಡಕ್ಕೆ ಆಯ್ಕೆಯಾಗಲು ಕಾರಣವಾಗಿದೆ.
* 2015-16ರ ಋತುವಿನ ರಣಜಿ ಟ್ರೋಫಿಯಲ್ಲಿ ಸರನ್ ಪಂಜಾಬ್ ತಂಡದ ಪರ ಏಳು ಪಂದ್ಯಗಳಲ್ಲಿ ಆಡಿ 18 ವಿಕೆಟ್ಗಳನ್ನು ಗಳಿಸಿದ್ದಾರೆ.
* ಸರಣ್ ಬಾಕ್ಸಿಂಗ್ನಲ್ಲೂ ತನ್ನ ಕೈ ಚಳಕ ತೋರಿದ್ದು, ಭಿವಾನಿಯಲ್ಲಿರುವ ಬಾಕ್ಸಿಂಗ್ ಗರಡಿಯಲ್ಲಿ ಬಾಕ್ಸಿಂಗ್ ಕೌಶಲಗಳನ್ನು ಕಲಿತಿದ್ದಾರೆ.
ಕಳೆದ ಕೆಲವು ಋತುಗಳಲ್ಲಿ ಸರಣ್ಗೆ ಗಾಯದ ಸಮಸ್ಯೆ ನಿರಂತರವಾಗಿ ಕಾಡಿದ್ದ ಹಿನ್ನೆಲೆಯಲ್ಲಿ ಅವರು ಕ್ರಿಕೆಟ್ನಿಂದ ದೂರ ಸರಿದಿದ್ದರು. ಐಪಿಎಲ್ ನಲ್ಲೂ ಆಡಲು ಸಾಧ್ಯವಾಗಿರಲಿಲ್ಲ. ಈಗ ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಟೀಂ ಇಂಡಿಯಾಕ್ಕೆ ಸೇರಿದ್ದಾರೆ. (ಒನ್ ಇಂಡಿಯಾ ಸುದ್ದಿ)