ನವದೆಹಲಿ, ಜನವರಿ 24: ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಸುಸೂತ್ರ ಆಡಳಿತಕ್ಕಾಗಿ ನೂತನ ಪದಾಧಿಕಾರಿಗಳನ್ನು ನೇಮಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ.
ಕೆಲ ದಿನಗಳ ಹಿಂದಷ್ಟೇ, ನ್ಯಾ. ಲೋಧಾ ಸಮಿತಿಯು ತನ್ನ ಆಯ್ಕೆಯ ಬಿಸಿಸಿಐ ಆಡಳಿತ ಮಂಡಳಿಯ ಪದಾಧಿಕಾರಿಗಳ ಪಟ್ಟಿಯನ್ನು ನೀಡಿತ್ತು. ಆದರೆ, ಇದರಲ್ಲಿ ಕೆಲವರು 70 ವರ್ಷ ಮೇಲ್ಪಟ್ಟವರಾಗಿದ್ದರಿಂದ ಅವರನ್ನು ಆಡಳಿತ ಮಂಡಳಿಗೆ ನೇಮಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿತ್ತಲ್ಲದೆ, ತಾನೇ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ನಿರ್ಧರಿಸುವುದಾಗಿ ತಿಳಿಸಿತ್ತು.
ಅದರಂತೆ, ಇಂದು (ಜನವರಿ 24ರಂದು) ನಡೆಯುವ ವಿಚಾರಣೆಯ ವೇಳೆ ಸರ್ವೋಚ್ಛ ನ್ಯಾಯಾಲಯವು ಪದಾಧಿಕಾರಿಗಳ ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಬೇಕಿತ್ತು. ಆದರೆ, ಈ ನಿರ್ಧಾರವನ್ನು ಅದು ಮುಂದೂಡಿದೆ.
ಏತನ್ಮಧ್ಯೆ, ನೂತನ ಆಡಳಿತ ಮಂಡಳಿ ರಚನೆಯನ್ನು ಸದ್ಯಕ್ಕೆ ಮುಂದೂಡುವಂತೆ ವಿಚಾರಣೆ ವೇಳೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ನ್ಯಾಯ ಪೀಠವನ್ನು ಪ್ರಾರ್ಥಿಸಿದರು. ಶೀಘ್ರದಲ್ಲೇ ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿದಂತೆ ಹೊಸ ನೀತಿ ಸಂಹಿತೆಯನ್ನು ಕೇಂದ್ರ ಸರ್ಕಾರ ರೂಪಿಸಲಿರುವುದರಿಂದ ಪದಾಧಿಕಾರಿಗಳ ಆಯ್ಕೆಯನ್ನು ಮುಂದೂಡುವಂತೆ ಪ್ರಾರ್ಥಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ, ಇಷ್ಟು ದಿನ ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಕೇಂದ್ರ ಸರ್ಕಾರವು ಏಕೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿರಲಿಲ್ಲ ಎಂದು ಪ್ರಶ್ನಿಸಿತು.