ನವದೆಹಲಿ, ಡಿಸೆಂಬರ್ 05: ದೆಹಲಿಯ ವಾಯು ಮಾಲಿನ್ಯದ ಬಗ್ಗೆ ಆರಿವಿದ್ದರೂ ಪಂದ್ಯವನ್ನು ಆಯೋಜಿಸಿದ್ದರ ಬಗ್ಗೆ ಪ್ರಶ್ನಿಸಿ ಬಿಸಿಸಿಐಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದೆ. ಈ ನಡುವೆ ಮೂರನೇ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾದ ವೇಗಿ ಲಕ್ಮಲ್ ಅವರು ಮೈದಾನದಲ್ಲೇ ವಾಂತಿ ಮಾಡಿಕೊಂಡ ಘಟನೆ ನಡೆದಿದೆ.
ಭಾರತ ವಿರುದ್ಧ 3ನೇ ಟೆಸ್ಟ್ ಗೆಲ್ಲಲು ಶ್ರೀಲಂಕಾಕ್ಕೆ 379ರನ್ ಬೇಕು
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವಿಪರೀತ ಹೊಗೆ, ಮಂಜು ಕವಿದ ವಾತವರಣ, ಮಾಲಿನ್ಯದ ಸಮಸ್ಯೆ ಮತ್ತೆ ಕಾಡುತ್ತಿದೆ.
ಭಾರತದ ಎರಡನೇ ಇನ್ನಿಂಗ್ಸ್ ನ 6ನೇ ಓವರ್ ಜಾರಿಯಲ್ಲಿರುವಾಗ ಶ್ರೀಲಂಕಾದ ವೇಗಿ ಸುರಂಗ ಲಕ್ಮಲ್ ಅವರು ವಾಂತಿ ಮಾಡಿಕೊಂಡರು. ನಂತರ ಧನಂಜಯ ಡಿ ಸಿಲ್ವಾ ವಾಂತಿ ಕೂಡ ಮಾಡಿಕೊಂಡಿದ್ದಾರೆ. ಆಂಟಿ ಪೊಲ್ಯುಶನ್ ಮಾಸ್ಕ್ ಧರಿಸಿ ಆಡುತ್ತಿದ್ದರೂ ಸಿಂಹೀಳಿಯರು ಮಾಲಿನ್ಯಕ್ಕೆ ತತ್ತರಿಸಿದ್ದಾರೆ.
ಮುಖ ಮುಚ್ಚಿಕೊಂಡ ಲಂಕನ್ನರಿಗೆ ಮಂಗಳಾರತಿ ಮಾಡಿದ ಟ್ವೀಟ್ ಲೋಕ
ವಾಯುಮಾಲಿನ್ಯದ ಕಾರಣ ಕೊಟ್ಟು ಶ್ರೀಲಂಕಾ ತಂಡ ಮೈದಾನದಿಂದ ಹೊರನಡೆಯಲು ಮುಂದಾಗಿದ್ದು, ಪಂದ್ಯ ಮೂರು ಬಾರಿ ಸ್ಥಗಿತಗೊಂಡಿದ್ದು, ಒತ್ತಡಕ್ಕೆ ಮಣಿದು ಕೊಹ್ಲಿ ಅವರು ತ್ವರಿತವಾಗಿ ಭಾರತದ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದು ನೆನಪಿರಬಹುದು. ಇದಾದ ಬಳಿಕ ಈ ವಾಂತಿ ಸರಣಿ ಘಟನೆ ನಡೆದಿದೆ.
ಕಳೆದ ವರ್ಷ ಮಾಲಿನ್ಯದ ಕಾರಣಕ್ಕೆ ಎರಡು ರಣಜಿ ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಶ್ರೀಲಂಕಾ ಆಟಗಾರರು ಮಾತ್ರ ಮಾಸ್ಕ್ ಧರಿಸಿ ಮೈದಾನದಲ್ಲಿ ಆಡುತ್ತಿದ್ದನ್ನು ನೋಡಿ ಸಾಮಾಜಿಕ ಜಾಲ ತಾಣಗಳಲ್ಲಿ ಲಂಕನ್ನರ ವಿರುದ್ಧ ಭಾರಿ ಟೀಕೆಗಳು ಕೇಳಿ ಬಂದಿತ್ತು.