ನವದೆಹಲಿ, ಜುಲೈ 04: ಟೀಂ ಇಂಡಿಯಾದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಸತ್ಯವೊಂದರನ್ನು ಬಹಿರಂಗಪಡಿಸಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರು ಒಮ್ಮೆ ಯುವರಾಜ್ ಸಮ್ಮುಖದಲ್ಲಿ ನನಗೆ ತಪರಾಕಿ ಕೊಟ್ಟಿದ್ದರು ಎಂದಿದ್ದಾರೆ.
ಪಾಕಿಸ್ತಾನದ ಶರವೇಗದ ಬೌಲರ್ ಶೋಯಿಬ್ ಅಖ್ತರ್, ಆಲ್ ರೌಂಡರ್ ಯುವರಾಜ್ ಸಿಂಗ್ ಹಾಗೂ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮೂವರು ಒಳ್ಳೆ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಮೈದಾನದಲ್ಲಿ ಮಾತ್ರ ಹರ್ಭಜನ್ ಜೊತೆ ಶೋಯಿಬ್ ಅನೇಕ ಬಾರಿ ಕಿತ್ತಾಡಿಕೊಂಡಿದ್ದಾರೆ. [ವಿಡಿಯೋ : ರಾಯುಡು-ಹರ್ಭಜನ್ ಸಿಂಗ್ ಕಿತ್ತಾಟ]
ಹರ್ಭಜನ್ ಸಿಂಗ್ ಅವರು ಇಂಥ ಸಿಹಿ ಕಹಿ ಘಟನೆಗಳನ್ನು ಇತ್ತೀಚೆಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ಶೋಯಿಬ್ ನನ್ನನ್ನು ಯಾವಾಗಲೂ ಕಿಚಾಯಿಸುತ್ತಿದ್ದ. ಅದರಲ್ಲೂ ಆತ ಬೌಲಿಂಗ್ ಮಾಡುವಾಗ ನಾನು ಬ್ಯಾಟಿಂಗ್ ಗೆ ಬಂದರೆ ಮುಗಿದೇ ಹೋಯ್ತು. ಹೀಗೆ ಒಂದು ಪಂದ್ಯದಲ್ಲಿ 'ನನ್ನ ಬೌಲಿಂಗ್ ನಲ್ಲಿ ಸಾಧ್ಯವಾದರೆ ಸಿಕ್ಸ್ ಬಾರಿಸು' ಎಂದು ನನಗೆ ಚಾಲೆಂಜ್ ಮಾಡಿದ. [ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾಗೆ ಚೆಂದದ ಸೀಮಂತ]
ನಾನು ಚಾಲೆಂಜ್ ಸ್ವೀಕರಿಸಿ ಸಿಕ್ಸ್ ಬಾರಿಸಿದೆ. ಇದರಿಂದ ಸಿಟ್ಟಿಗೆದ್ದ ಶೋಯಿಬ್ ಸತತವಾಗಿ ಬೌನ್ಸರ್ ಹಾಕಿದ. ನಾನು ಅದನ್ನು ತಪ್ಪಿಸಿಕೊಂಡೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ, ಪಂದ್ಯದ ನಂತರ ಏನು ಆಗದಂತೆ ಒಟ್ಟಿಗೆ ಕುಳಿತು ಊಟ ತಿಂಡಿ ಮಾಡುತ್ತಿದ್ದೇವೆ. [ಅಭಿಮಾನಿಗೆ 'ನಾಯಿ' ಎಂದು ಕರೆದ ಹರ್ಭಜನ್]
ಹೀಗೆ ಒಂದು ದಿನ ನಾನು ಹೆಚ್ಚು ರೇಗಿಸಿಬಿಟ್ಟೆ. ಹೀಗೆ ಮಾಡಿದರೆ ನಿನ್ನ ಹೋಟೆಲ್ ರೂಮಿಗೆ ಬಂದು ಹೊಡೆಯುತ್ತೀನಿ ಎಂದು ಬೆದರಿಸಿದ. ಧೈರ್ಯ ಇದ್ದರೆ ಬಾ ಎಂದೆ. ನಾನು ಯುವಿ ರೂಮಿನಲ್ಲಿರುವಾಗ ಸಹಜವಾಗಿ ಬಂದ ಶೋಯಿಬ್, ಇಬ್ಬರ ಮೇಲೆ ಎರಗಿ ಬಿದ್ದು ದಬದಬ ಬಾರಿಸಿ ಬಿಟ್ಟ. ಆದರೆ, ಅದು ಕೋಪದಿಂದ ಕೊಟ್ಟ ಪೆಟ್ಟಾಗಿರಲಿಲ್ಲ. ಪ್ರೀತಿಯಿಂದ ಕೊಟ್ಟ ಹೊಡೆತವಾಗಿತ್ತು.ಆದರೂ ಆತ ದೈತ್ಯ ದೇಹಿಯಾಗಿದ್ದರಿಂದ ಇಬ್ಬರಿಗೂ ಸರಿಯಾಗೆ ಪೆಟ್ಟು ಬಿತ್ತು ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ.
ಒಬ್ಬ ಆಟಗಾರನಾಗಿ ಪಾಕಿಸ್ತಾನದಂಥ ದೊಡ್ಡ ತಂಡದ ಮೇಲೆ ಜಯ ದಾಖಲಿಸುವುದು ಪರಮ ಸಂತೋಷ ತರುತ್ತದೆ. ವಾಸೀಂ ಅಕ್ರಮ್, ವಾಖರ್ ಯೂನಸ್, ಸಕ್ಲೇನ್ ಮುಷ್ತಾಕ್ ಹಾಗೂ ಶೋಯಿಬ್ ಅಖ್ತರ್ ರಂಥ ದಿಗ್ಗಜರಿರುವ ತಂಡದ ವಿರುದ್ಧ ಆಡಿದ ಖುಷಿಯಿದೆ. ಮಾಧ್ಯಮಗಳು ಭಾರತ ಹಾಗೂ ಪಾಕಿಸ್ತಾನ ಪಂದ್ಯಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಡುವುದರ ಸಾಧಕ ಬಾಧಕಗಳ ಬಗ್ಗೆ ಕೂಡಾ ಹರ್ಭಜನ್ ಮಾತನಾಡಿದರು. (ಒನ್ಇಂಡಿಯಾ ಸುದ್ದಿ)