ನವದೆಹಲಿ, ಏಪ್ರಿಲ್ 06: ಕ್ರಿಕೆಟ್ ನಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ನ್ಯಾ. ಲೋಧಾ ವರದಿಯನ್ನು ಬಿಸಿಸಿಐ ಜಾರಿಗೆಗೊಳಿಸದೆ ಇರುವುದಕ್ಕೆ ಸುಪ್ರೀಂ ಕೋರ್ಟ್ ಫುಲ್ ಗರಂ ಆಗಿದೆ. ಕ್ರಿಕೆಟ್ ಅಭಿವೃದ್ಧಿಗಾಗಿ ಕ್ರಿಕೆಟ್ ಮಂಡಳಿ ಯಾವ ಕೆಲಸವನ್ನು ಮಾಡುತ್ತಿಲ್ಲ ಜತೆಗೆ ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರ್ ನೇತೃತ್ವದ ಪೀಠ ಬಿಸಿಸಿಐಗೆ ಚಾಟಿ ಏಟು ನೀಡಿ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಬಿಸಿಸಿಐನ ಕಾರ್ಯವೈಖರಿಯನ್ನು ಗಂಭಿರವಾಗಿ ಪರಿಗಣಿಸಿದ ಕೋರ್ಟ್, ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಿದ ಅನುದಾನದ ಕುರಿತು ಬಿಸಿಸಿಐಗೆ ಮಾಹಿತಿಯನ್ನು ಕೇಳಿದ್ದು, ಕಳೆದ ಐದು ವರ್ಷಗಳಿಂದ ಯಾವುದೇ ರಾಜ್ಯಕ್ಕೆ ಅನುದಾನ ನೀಡಿಲ್ಲವೆಂಬುವುದು ದಾಖಲೆಗಳಿಂದ ಬಹಿರಂಗವಾಗಿದ್ದು ಕೋರ್ಟ್ ಕ್ರಿಕೆಟ್ ಮಂಡಳಿಗೆ ಹಿಗ್ಗಮುಗ್ಗ ತರಾಟೆಗೆ ತೆಗೆದುಕೊಂಡಿದೆ. [ಏಪ್ರಿಲ್ 8ಕ್ಕೆ ಗ್ಲಾಮರ್ ಸ್ಪರ್ಶದೊಂದಿಗೆ ಐಪಿಎಲ್ 9ಕ್ಕೆ ಚಾಲನೆ]
ಕೆಲ ರಾಜ್ಯಗಳಿಗೆ ಭಾರಿ ಅನುದಾನ ಒದಗಿಸಿದ್ದು, ನಾಗಾಲ್ಯಾಂಡ್, ಮಣಿಪುರ, ಛತ್ತೀಸ್ ಗಡ್, ಬಿಹಾರ ಸೇರಿದಂತೆ ಮತ್ತಿತರ 11 ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಡಿಗಾಸು ನೀಡದಿರುವುದಕ್ಕೆ ಕೋರ್ಟ್ ಗರಂ ಆಗಿದೆ. ಅನುದಾನ ಹಂಚಿಕೆಯಲ್ಲಿ ಸಮಾನತೆಯನ್ನು ತೋರಬೇಕು ಎಲ್ಲಾ ರಾಜ್ಯಗಳಲ್ಲಿ ಆಟಕ್ಕೆ ಉತ್ತೇಜನೆ ನೀಡಬೇಕು ಆದ್ದರಿಂದ ಸರಿಯಾಗಿ ಅನುದಾನ ಒದಗಿಸಿ ಎಂದು ಕೋರ್ಟ್ ಬಿಸಿಸಿಐಗೆ ಸಲಹೆ ನೀಡಿತು.
ರಾಜ್ಯಗಳಿಗೆ ಹಣ ನೀಡುವಲ್ಲಿ ಯಾವುದೇ ನಿರ್ಣಯವನ್ನು ಕೈಗೊಳ್ಳದೆ ಹಣ ನೀಡುವುದು ಭ್ರಷ್ಟಾಚಾರವಾಗುತ್ತದೆ. ಹಾಗಾಗಿ ಅನುದಾನ ನೀಡುವಲ್ಲಿ ಸರಿಯಾದ ನಿರ್ಣಯಗಳನ್ನು ಕೈಗೋಳಬೇಕು ಎಂದು ಕೋರ್ಟ್ ಹೇಳಿದೆ.[ಬಿಸಿಸಿಐಗೆ ಸಾವಿರಾರು ಕೋಟಿ ಆದಾಯ ನಷ್ಟದ ಭೀತಿ!]
ನ್ಯಾ. ಲೋಧಾ ವರದಿಯ ಕೆಲ ಶಿಫಾರಸ್ಸುಗಳನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು ಸ್ವಹಿತಾಸಕ್ತಿ ಸಂಘರ್ಷ ತಡೆಯುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವಿತ್ತಧಿಕಾರಿಗಳನ್ನು ನೇಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಪರ ವಕೀಲ ಕೆ.ಕೆ ವೇಣುಗೋಪಾಲ್ ಕೋರ್ಟ್ ಗೆ ತಿಳಿಸಿದರು.
ಈ ಹಿಂದೆ ಐಪಿಎಲ್ ನಲ್ಲಿ ಸ್ಟಾರ್ಟ್ ಫಿಕ್ಸಿಂಗ್ ಹಾಗೂ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ತನಿಖೆ ನಡೆಸಲು 2015 ರಲ್ಲಿ ಸುಪ್ರೀಂ ಕೋರ್ಟ್ ಈ ಲೋಧಾ ಸಮಿತಿಯನ್ನು ಜಾರಿಗೆ ತಂದಿತ್ತು.