ಆಸೀಸ್ ಗೆ ನೀಡಿದ ಆಘಾತ ಮರೆಯಲು ಸಾಧ್ಯವೇ?
ಭಾರತೀಯರನ್ನು ಆಡಿಕೊಳ್ಳುತ್ತಿದ್ದ ಆಸ್ಟ್ರೇಲಿಯಾ ದಂಥ ತಂಡಕ್ಕೆ ಕೋಲ್ಕತಾ ದಲ್ಲಿ ನೀಡಿದ ಹೊಡೆತ ಮರೆಯಲು ಸಾಧ್ಯವೇ? ಗಂಗೂಲಿ ತವರು ಕೋಲ್ಕತಾದಲಲ್ಲೇ ನಡೆದ ಟೆಸ್ಟ್ ಪಂದದ್ಯ, ವಿವಿಎಸ್ ಲಕ್ಷಣ್ ಮತ್ತು ರಾಹುಲ್ ದ್ರಾವಿಡ್ ಜತೆಯಾಟದ ಇತಿಹಾಸ ಕ್ರಿಕೆಟ್ ಲೋಕ ಕಂಡ ಅಚ್ಚರಿಗಳಲ್ಲಿ ಒಂದು.
ಆಲ್ ರೌಂಡರ್ ಕನಸು
ಏಳನೇ ಆಟಗಾರ ಆಲ್ ರೌಂಡರ್ ಬೇಕು ಎಂಬ ಕಾರಣಕ್ಕೆ ಅದೆಷ್ಟು ಪ್ರತಿಭೆಗಳಿಗೆ ಅವಕಾಶ ನೀಡಿದ್ದರೊ? ಇರ್ಫಾನ್ ಪಠಾಣ್, ಬದಾನಿಯಂತವರಿಗೆ ಬೆನ್ನೆಲುಬಾಗಿ ನಿಂತ ದಾದಾ ಕನಸಿನ ಆಟಗಾರ ಕೊನೆಗೂ ಸಿಗಲೆ ಇಲ್ಲ! (ರವೀಂದ್ರ ಜಡೇಜಾ ಆ ಸ್ಥಾನ ತುಂಬಿಯಾರೆ? ಇನ್ನು ಸಾಬೀತಾಗಿಲ್ಲ.)
ಧೋನಿ ಉತ್ತಮ, ಗಂಗೂಲಿ ಅತ್ಯುತ್ತಮ
ಮಹೇಂದ್ರ ಸಿಂಗ್ ಧೋನಿ ಉತ್ತಮ ನಾಯಕ. ಆದರೆ ಸೌರವ್ ಗಂಗೂಲಿ ಅತ್ಯುತ್ತಮ ನಾಯಕ. ಲಯದಲ್ಲಿದ್ದ ತಂಡವನ್ನು, ಆಟಗಾರರನ್ನು ಮುನ್ನಡೆಸುವುದಕ್ಕೂ, ತಾಳ-ಲಯ ಎಲ್ಲ ಕಳೆದುಕೊಂಡ ತಂಡ ಮುನ್ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ. ಎರಡನೇ ಬಗೆಯದ್ದು ಕೈಯಲ್ಲಿ, ಖಾತೆಯಲ್ಲಿ ಹಣವಿಲ್ಲದೆ ಮನೆಯ ಯಜಮಾನಿಕೆಯಲ್ಲಿ ಸಿಕ್ಕ ಹಾಗೆ!
ವಿಶ್ವ ಕಪ್ ಗೆದ್ದಿಲ್ಲ
ಗಂಗೂಲಿ ನಾಯಕತ್ವದಲ್ಲಿ ಭಾರತಕ್ಕೆ ವಿಶ್ವಕಪ್ ಜಯ ಸಿಗದೇ ಇರಬಹುದು. ಆದರೆ ಇಡೀ ವಿಶ್ವಕ್ಕೆ ಭಾರತದ ಕ್ರಿಕೆಟ್ ಶಕ್ತಿ ಪರಿಚಯವಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಗೆಲುವಿನ ರುಚಿ ಹತ್ತಿಸಿದ ನಾಯಕ ಅಂದರೆ ಅದು ಸೌರವ್ ಗಂಗೂಲಿ.
ಗಂಗೂಲಿ ಬಗ್ಗೆ ಬರೆಯಲೇಬೇಕು
ಈಗ್ಯಾಕೆ ಗಂಗೂಲಿ ಬಗ್ಗೆ ಬರೆಯುತ್ತಿದ್ದಾರೆ? ಎಂಬ ಪ್ರಶ್ನೆ ನಿಮಗೆ ಮೂಡಿದರೂ ಆಶ್ಚರ್ಯವಿಲ್ಲ. ಅದಕ್ಕೂ ಕಾರಣವಿದೆ. ಭಾರತ ಮತ್ತು ಪಾಕಿಸ್ತಾನದ ನಡುವಣ ಟಿ-20 ಪಂದ್ಯ ಮುಗಿದಿದೆ. ಭಾರತ ಮತ್ತೊಮ್ಮೆ ಜಯಶಾಲಿಯಾಗಿದೆ.. ಆದರೆ ಭಾರತದ ವಿಜಯಕ್ಕೆ ನಿಜವಾಗಿ ಕಾರಣರಾದವರು ಗಂಗೂಲಿ.
ತೊಪ್ಪೆಯಾಗಿದ್ದ ಮೈದಾನ
ಮಾರ್ಚ್ 19 ರಂದು ಕೋಲ್ಕತಾದಲ್ಲಿ ಒಂದೇ ಸಮನೆ ಸುರಿದ ಭಾರಿ ಮಳೆ ಪರಿಣಾಮ ಈಡನ್ ಗಾರ್ಡನ್ ಮೈದಾನ ತೊಯ್ದು ತೊಪ್ಪೆಯಾಗಿತ್ತು. ಕ್ರೀಡಾಂಗಣದ ಪೂರ್ತಿ ನೀರು ತುಂಬಿ ಕೊಂಡು ಪಂದ್ಯ ನಡೆಸಲು ಅಸಾಧ್ಯವೆನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಹವಾಮಾನ ಇಲಾಖೆಯ ಸೂಚನೆಯನ್ನು ಮನಗಂಡಿದ್ದ ಗಂಗೂಲಿ ಹೆಚ್ಚುವರಿ ಟಾರ್ಪಲ್ ಗಳನ್ನು ತರಿಸಿ ಇಟ್ಟುಕೊಂಡಿದ್ದರು. ನಿಗದಿತ ವೇಳೆಗೆ ಪಂದ್ಯ ಆರಂಭವಾಗಲು ಗಂಗೂಲಿ ಮುನ್ನೆಚ್ಚರಿಕೆ ಮೂಲ ಕಾರಣವಾಯಿತು.
ಚಿಕ್ಕ ಮುನ್ನೆಚ್ಚರಿಕೆ ಮಾಡಿದ ಚಮತ್ಕಾರ
ಕೆಲವೊಮ್ಮೆ ತೆಗೆದುಕೊಳ್ಳುವ ಅತಿ ಚಿಕ್ಕ ಮುನ್ನಚ್ಚರಿಕೆ ಕ್ರಮಗಳು ಎಂಥ ಚಮತ್ಕಾರ ಮಾಡಿ ಬಿಡಬಲ್ಲವು ಎಂಬುದಕ್ಕೆ ಪಂದ್ಯ ನಡೆದಿದ್ದೆ ಸಾಕ್ಷಿ. ಬಂಗಾಳ ಕ್ರಿಕೆಟ್ ಸಂಸ್ಥೆಯ ಹೊಣೆ ಹೊತ್ತ ಗಂಗೂಲಿ ನಿಜ ನಾಯಕರಾಗಿ ಮತ್ತೆ ಕಾಣಿಸಿಕೊಂಡರು.