ಬೆಂಗಳೂರು, ಜನವರಿ 05: ಟೀಂ ಇಂಡಿಯಾ ನಾಯಕತ್ವದಿಂದ ಕೆಳಗಿಳಿದ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಮೆಚ್ಚುಗೆಯ ಮಾತುಗಳನ್ನಾಡಿ ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಧೋನಿ ಈ ನಿರ್ಧಾರ ಕೈಗೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಏಕದಿನ ಅಂತಾರಾಷ್ಟ್ರೀಯ ತಂಡ ಹಾಗೂ ಟ್ವೆಂಟಿ20 ತಂಡದ ಯಶಸ್ವಿ ನಾಯಕರಾಗಿದ್ದ ಧೋನಿ ಅವರಿಗೆ ಸಚಿನ್ ಅವರು ಕಂಗ್ರಾಟ್ಸ್ ಎಂದಿದ್ದಾರೆ. [ಏಕದಿನ ಕ್ರಿಕೆಟ್ ನಲ್ಲಿ ಧೋನಿಯೇ 'ಕ್ಯಾಪ್ಟನ್ ಕಿಂಗ್']
ಟೀಂ ಇಂಡಿಯಾ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ನಿಮಗೆ ಥ್ಯಾಂಕ್ಸ್, ನಿಮ್ಮ ನಾಯಕತ್ವ ಗುಣಗಳು ಅನುಕರಣೀಯ ಎಂದಿದ್ದಾರೆ. ['ಮ್ಯಾಚ್ ಫಿನಿಷರ್:' ಸಚಿನ್, ಕೊಹ್ಲಿಗಿಂತ ಧೋನಿಯೇ ಬೆಸ್ಟ್!]
ಹಾಗೆ ನೋಡಿದರೆ ವಿಶ್ವಕಪ್ ಗೆಲ್ಲುವುದು ಸಚಿನ್ ಅವರ ದೊಡ್ಡ ಕನಸಾಗಿತ್ತು. ಧೋನಿ ನಾಯಕತ್ವದಲ್ಲಿ 2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ಸಚಿನ್ ಸಂಭ್ರಮಿಸಿದ ರೀತಿ ಅಭಿಮಾನಿಗಳು ಇನ್ನೂ ಮರೆತ್ತಿಲ್ಲ.
35 ವರ್ಷ ವಯಸ್ಸಿನ ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜನೆಯ ಎಲ್ಲಾ ಮೂರು ಜಾಗತಿಕ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. 2007ರಲ್ಲಿ ವಿಶ್ವ ಟ್ವೆಂಟಿ20, 2011ರಲ್ಲಿ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದರು. 2014ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಧೋನಿ ಅವರು 2007ರಿಂದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಾರೆ.
ಈಗಾಗಲೇ ಟೆಸ್ಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರ ಹೆಗಲಿಗೆ ಏಕದಿನ ಹಾಗೂ ಟಿ20 ನಾಯಕತ್ವ ವಹಿಸುವ ಸಾಧ್ಯತೆಯಿದೆ. ಜನವರಿ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಜನವರಿ 15 ರಂದು ಪುಣೆಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.