ಮುಂಬೈ, ಜ. 13: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ತಮ್ಮ ಶಾಲಾ ದಿನಗಳ ಕರಾಳ ನೆನಪೊಂದನ್ನು ಬುಧವಾರ ಹಂಚಿಕೊಂಡಿದ್ದಾರೆ. ರೈಲ್ವೆ ಟ್ರ್ಯಾಕ್ ಸುರಕ್ಷತೆ ಬಗ್ಗೆ ಮಾತನಾಡುವಾಗ ಸಚಿನ್ ಅವರು ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು.
ಮುಂಬೈ ರೈಲ್ವೆ ಪೊಲೀಸರು ಆರಂಭಿಸಿರುವ ಹೊಸ ಎರಡು ಸೌಲಭ್ಯಗಳನ್ನು ಉದ್ಘಾಟಿಸಿ ಸಚಿನ್ ಮಾತನಾಡಿದರು. SAMEEP(Safety Alert Messages Exclusively For Passengers) ಹಾಗೂ ಬಿ ಸೇಫ್ ಎಂಬ ಸೌಲಭ್ಯಗಳನ್ನು ಸಚಿನ್ ಲೋಕಾರ್ಪಣೆ ಮಾಡಿದರು.
11ನೇ ವಯಸ್ಸಿನಿಂದ ನಾನು ಮುಂಬೈನ ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸಿದ್ದೇನೆ. ನನ್ನ ಬಳಿ ಕಿಟ್ ಬ್ಯಾಗ್ ಇರುತ್ತಿತ್ತು. ತುಂಬಿದ ರೈಲು ಹತ್ತಿ ಮನೆ ಸೇರುವುದೇ ದೊಡ್ಡ ಸಾಹಸದ ವಿಷಯವಾಗಿತ್ತು. ನಾನು ನನ್ನ ಐದಾರು ಸ್ನೇಹಿತರುವಿಲೆ ಪಾರ್ಲೆಗೆ ಹೋಗಿ ವಾಪಸ್ ಬರುವಾಗ ದಾದರ್ ಕಡೆ ಹೋಗುವ ರೈಲು ಹಿಡಿಯಬೇಕಿತ್ತು. ರೈಲ್ವೆ ಟ್ರ್ಯಾಕ್ ದಾಟಬೇಕಾಗಿತ್ತು.
ಆದರೆ, ರೈಲಿನ ಹಳಿಗಳನ್ನು ದಾಟಲು ತೊಡಗುತ್ತಿದ್ದಂತೆ ಎರಡು ಕಡೆ ರೈಲುಗಳು ವೇಗವಾಗಿ ಬರುತ್ತಿತ್ತು. ಎರಡು ಕಡೆ ರೈಲು ವೇಗವಾಗಿ ಚಲಿಸುವಾಗ ನಾವು ನಮ್ಮ ಕಿಟ್ ಗಳನ್ನು ಕಾಲು ಸಂದಿ ಇಟ್ಟುಕೊಂಡು ಭಯದಿಂದ ನಡುಗುತ್ತಾ ನಿಲ್ಲಬೇಕಾಗಿತ್ತು. ಈಗಲೂ ಆ ದೃಶ್ಯ ನೆನಸಿಕೊಂಡರೆ ಭಯವಾಗುತ್ತದೆ. ಈ ರೀತಿ ಮತ್ತೆ ಎಂದೂ ರೈಲು ಹಳಿ ದಾಟುವ ಸಾಹಸ ಮಾಡಲಿಲ್ಲ ಎಂದು 42 ವರ್ಷ ವಯಸ್ಸಿನ ಸಚಿನ್ ಹೇಳಿದ್ದಾರೆ.
ವೇಗವಾಗಿ ಮನೆ ಅಥವಾ ಕಚೇರಿ ಸೇರುವ ಆತುರದಿಂದ ತೆಗೆದುಕೊಳ್ಳುವ ಒಂದು ತಪ್ಪು ನಿರ್ಧಾರ ಜೀವಕ್ಕೆ ಅಪಾಯ ತರಬಲ್ಲುದು. ರೈಲು ಹಳಿ ದಾಟುವಾಗ ಮುನ್ನಚ್ಚರಿಕೆ ವಹಿಸಿ. ರೈಲಿನ ಟಾಪ್ ಮೇಲೆ ಕುಳಿತು ಪ್ರಯಾಣಿಸುವುದು ಇನ್ನೂ ಅಪಾಯಕಾರಿ. ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ ಪೊಲೀಸರು ಒದಗಿಸಿರುವ ಹೊಸ ಸೌಲಭ್ಯ, ಸೂಚನೆಗಳನ್ನು ಪಾಲಿಸಿ ಎಂದು ಸಚಿನ್ ಕರೆ ನೀಡಿದ್ದಾರೆ. (ಐಎಎನ್ಎಸ್)