ಮುಂಬೈ, ಜುಲೈ 11: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಯವರನ್ನು ಆಯ್ಕೆ ಮಾಡಲಾಗಿದೆ. ಭಾರತೀಯ ಕ್ರಿಕೆಟ್ ಸಂಸ್ಥೆಯ (ಬಿಸಿಸಿಐ) ವತಿಯಿಂದ ಕೋಚ್ ನೇಮಕ ಮಾಡುವ ಜವಾಬ್ದಾರಿ ಹೊತ್ತಿದ್ದ ಕ್ರಿಕೆಟ್ ಸಲಹಾ ಮಂಡಳಿ (ಸಿಎಸಿ) ರವಿ ಶಾಸ್ತ್ರಿ ಆಯ್ಕೆಯನ್ನು ಅಂತಿಮಗೊಳಿಸಿ ಪ್ರಕಟಗೊಳಿಸಿದೆ.
ಇದರ ಜತೆಯಲ್ಲೇ, ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿಯೂ, ಮತ್ತೊಬ್ಬ ಮಾಜಿ ಕ್ರಿಕೆಟಿಗ ಹಾಗೂ ಕಿರಿಯರ ಕ್ರಿಕೆಟ್ ತಂಡಗಳ ಕೋಚ್ ರಾಹುಲ್ ದ್ರಾವಿಡ್ ಅವರನ್ನು ನಿರ್ದಿಷ್ಟ ಪ್ರವಾಸಗಳ ವೇಳೆ ಟೀಂ ಇಂಡಿಯಾದ ಬ್ಯಾಟಿಂಗ್ ಸಲಹೆಗಾರರನ್ನಾಗಿಯೂ ನೇಮಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ರವಿಶಾಸ್ತ್ರಿ ವ್ಯಕ್ತಿ ವಿಶೇಷ
ಮಂಗಳವಾರ ಸಂಜೆ ಹೊತ್ತಿಗೆ ರವಿ ಶಾಸ್ತ್ರಿಯವರ ಆಯ್ಕೆಯನ್ನು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ರಾತ್ರಿ ವೇಳೆಗೆ ಆ ಸುದ್ದಿಗಳನ್ನು ಬಿಸಿಸಿಐ ನಿರಾಕರಿಸಿತು. ಆದರೆ, ಪುನಃ ರಾತ್ರಿ ವೇಳೆಗೆ ಸುದ್ದಿಗೋಷ್ಠಿ ನಡೆಸಿದ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ರವಿಶಾಸ್ತ್ರಿ, ಜಹೀರ್ ಹಾಗೂ ದ್ರಾವಿಡ್ ಅವರ ನೇಮಕಾತಿಗಳನ್ನು ಅಧಿಕೃತವಾಗಿ ಪ್ರಕಟಿಸಿದರು.
ಈ ಪ್ರತಿಷ್ಠಿತ ಹುದ್ದೆಗೆ, ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ದೊಡ್ಡ ಗಣೇಶ್, ಲಾಲ್ ಚಂದ್ ರಜಪೂತ್, ಲ್ಯಾನ್ಸ್ ಕ್ಲುಸ್ನರ್, ರಾಕೇಶ್ ಶರ್ಮ (ಒಮಾನ್ ತಂಡದ ಕೋಚ್), ಫಿಲ್ ಸಿಮನ್ಸ್ ಹಾಗೂ ಉಪೇಂದ್ರ ಬ್ರಹ್ಮಚಾರಿ (ಕ್ರಿಕೆಟ್ ಹಿನ್ನೆಲೆಯಿಲ್ಲದ ಇಂಜಿನಿಯರ್) ಎಂಬುವರಿಂದ ಒಟ್ಟು 10 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ ಸಿಎಸಿ 6 ಮಂದಿಯ ಅರ್ಜಿಯನ್ನು ಸಂದರ್ಶನಕ್ಕೆ ಅಂತಿಮಗೊಳಿಸಿತ್ತು.
ಕೋಚ್ ಹುದ್ದೆಗೆ 10 ಜನ ಫೈನಲ್, ರವಿಶಾಸ್ತ್ರಿ ರೇಸಿನಲ್ಲಿ ಮುಂದೆǃ
ಕೋಚ್ ಆಯ್ಕೆಯ ಜವಾಬ್ದಾರಿಯ ಸಿಎಸಿ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಮೇಲಿತ್ತು.
ಅಂದಹಾಗೆ, ರವಿ ಶಾಸ್ತ್ರಿಯವರು ಮುಂದಿನ 2 ವರ್ಷಗಳವರೆಗೆ ಟೀಂ ಇಂಡಿಯಾದ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ. 2019ರಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯವರೆಗೆ ರವಿಶಾಸ್ತ್ರಿ ಕೋಚ್ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
ಈ ಹಿಂದೆ, 2014ರಿಂದ 2015ರವರೆಗೆ ಟೀಂ ಇಂಡಿಯಾದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ರವಿ ಶಾಸ್ತ್ರಿಯವರಿಗೆ ಮತ್ತೊಮ್ಮೆ ಟೀಂ ಇಂಡಿಯಾದ ಸೇವೆ ಮಾಡುವ ಅವಕಾಶ ಬಂದೊದಗಿದೆ. ಇದಲ್ಲದೆ, 2007ರಲ್ಲಿ ರವಿಶಾಸ್ತ್ರಿಯವರು ಆಗಿನ ಟೀಂ ಇಂಡಿಯಾ ಕೋಚ್ ಗ್ರೇಗ್ ಚಾಪೆಲ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದಾಗ, ಹಂಗಾಮಿ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
ಜುಲೈ 26ರಿಂದ ಶುರುವಾಗಲಿರುವ ಟೀಂ ಇಂಡಿಯಾದ ಶ್ರೀಲಂಕಾ ಪ್ರವಾಸದಿಂದ ರವಿ ಶಾಸ್ತ್ರಿಯವರ ಸೇವೆ ಆರಂಭಗೊಳ್ಳಲಿದೆ.