ಬೆಂಗಳೂರು, ಡಿಸೆಂಬರ್ 24: ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಕರ್ನಾಟಕ ತೀವ್ರ ಮುಖಭಂಗ ಅನುಭವಿಸಿದೆ. ಕರ್ನಾಟಕವನ್ನು 7 ವಿಕೆಟ್ ಗಳಿಂದ ಸೋಲಿಸಿದ ತಮಿಳುನಾಡು ತಂಡ ಸುಲಭವಾಗಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದೆ.
ಕ್ವಾರ್ಟರ್ ಫೈನಲ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲೂ ಕರ್ನಾಟಕ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ, ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಎರಡು ದಿನಗಳಲ್ಲಿ ವಿನಯ್ ಪಡೆಯನ್ನು ಎರಡು ಬಾರಿ ಆಲೌಟ್ ಮಾಡಿದ ತಮಿಳುನಾಡು ತಂಡ ಈಗ ಸೆಮಿಫೈನಲ್ ನಲ್ಲಿ ಮುಂಬೈ ಅಥವಾ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕ ತಂಡ ಕೇವಲ 88ರನ್ ಗಳಿಸಿ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ 77 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 150 ಸ್ಕೋರಿಗೆ ಕರ್ನಾಟಕ ಸರ್ವಪತನ ಕಂಡಿತು.
ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ವಿರುದ್ಧ 64 ರನ್ ಮುನ್ನಡೆ ಪಡೆದುಕೊಂಡಿದ್ದ ತಮಿಳುನಾಡು ತಂಡಕ್ಕೆ ಗೆಲ್ಲಲು 87 ರನ್ ಟಾರ್ಗೆಟ್ ನೀಡಲಾಯಿತು. ದಿನೇಶ್ ಕಾರ್ತಿಕ್ 41 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ತಮಿಳುನಾಡಿನ ಮೂರು ವಿಕೆಟ್ ಗಳನ್ನು ಮಾತ್ರ ಕರ್ನಾಟಕ ಪಡೆಯಲು ಸಾಧ್ಯವಾಯಿತು.
ಸಂಕ್ಷಿಪ್ತ ಸ್ಕೋರ್ :
ಕರ್ನಾಟಕ
ಮೊದಲ ಇನಿಂಗ್ಸ್: 88/10
ಎರಡನೇ ಇನಿಂಗ್ಸ್: 150/10
ತಮಿಳುನಾಡು
ಮೊದಲ ಇನಿಂಗ್ಸ್: 152/10
ಎರಡನೇ ಇನಿಂಗ್ಸ್: 87/3
ಕೆಎಲ್ ರಾಹುಲ್, ಕರುಣ್ ನಾಯರ್, ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ವಿನಯ್ ಕುಮಾರ್ ರಂಥ ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಕಳಪೆ ಪ್ರದರ್ಶನ ನೀಡುವ ಮೂಲಕ ರಣಜಿ ಋತುವನ್ನು ಕರ್ನಾಟಕ ಮುಗಿಸಿದೆ.