ಗುವಹಾಟಿ, ಅ.5: ಹಾಲಿ ಚಾಂಪಿಯನ್ ಕರ್ನಾಟಕ ಗೆಲುವಿನ ಕನಸು ಭಗ್ನಗೊಳ್ಳುವುದಕ್ಕೂ ಮುನ್ನ ಆಟೋರಿಕ್ಷಾದಲ್ಲಿ ಸುತ್ತಾಡಿ ಬಸವಳಿದು ಮೈದಾನಕ್ಕೆ ಬಂದಿಳಿದ ಘಟನೆ ನಡೆದಿದೆ.
ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನದಂದು ಅಸ್ಸಾಂ ತಂಡ ತನ್ನ ವಿಕೆಟ್ ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಲ್ಲದೆ, ಮೂರು ಅಂಕ ಗಳಿಸುವಲ್ಲಿ ಯಶಸ್ವಿಯಾಯಿತು. ಮೊದಲ ಇನ್ನಿಂಗ್ಸ್ ಮುನ್ನಡೆ ಬಿಟ್ಟುಕೊಟ್ಟ ತಪ್ಪಿಗೆ ವಿನಯ್ ಕುಮಾರ್ ಪಡೆ ಕೇವಲ 1 ಅಂಕಕ್ಕೆ ತೃಪ್ತಿ ಪಟ್ಟಿತು.
ಇದಕ್ಕೂ ಮುನ್ನ ಕರ್ನಾಟಕ ತಂಡದ ನಾಯಕ ಆರ್ ವಿನಯ್ ಕುಮಾರ್ ಹಾಗೂ ತರಬೇತುದಾರ ಪ್ರಶಾಂತ್ ಪೂಜಾರ್ ಅವರು ಕ್ರಿಕೆಟ್ ಮೈದಾನಕ್ಕೆ ಬದಲು ಫುಟ್ಬಾಲ್ ಮೈದಾನದ ದರ್ಶನ ಮಾಡಿದ ಘಟನೆ ನಡೆದಿದೆ.
ಕೈಕೊಟ್ಟ ಬಸ್: ಕರ್ನಾಟಕದ ಆಟಗಾರರನ್ನು ಹೋಟೆಲ್ ನಿಂದ ಮೈದಾನಕ್ಕೆ ಕರೆದುಕೊಂಡು ಬರಲು ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಗೊತ್ತು ಮಾಡಿದ್ದ ಬಸ್ ಗೊತ್ತು ಮಾಡಿತ್ತು.[ಬಲಿಷ್ಠ ಕರ್ನಾಟಕಕ್ಕೆ ಆಘಾತ ನೀಡಿದ ಅಸ್ಸಾಂ]
ಮೂರು ದಿನ ಸರಿಯಾದ ಸಮಯಕ್ಕೆ ಬಂದ ಬಸ್ ನಾಲ್ಕನೇ ದಿನ ಕೈ ಕೊಟ್ಟಿದೆ. ಬೆಳಗ್ಗೆ 7 ಕ್ಕೆ ಬರದಿದ್ದ ಕಾರಣ, ಕಂಗಾಲಾಗಿ ಸ್ಥಳೀಯ ಮ್ಯಾನೇಜರ್ ನಿಖಿಲ್ ರಂಜನ್ ಅವರಿಗೆ ಕರೆ ಮಾಡಲಾಯಿತು. ಇನ್ನೇನು ಬಸ್ ಬರುತ್ತದೆ ಎಂಬ ಉತ್ತರ ಬಂತು.
ಅದರೆ, 7.30 ದಾಟಿದರೂ ಬಸ್ ಸುಳಿವು ಸಿಗಲಿಲ್ಲ. ಹೀಗಾಗಿ ಬಾಡಿಗೆ ಆಟೋ ಹತ್ತಿ ಮೈದಾನಕ್ಕೆ ತೆರಳಲು ನಿರ್ಧರಿಸಲಾಯಿತು ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕರ್ನಾಟಕ ಕ್ರಿಕೆಟ್ ತಂಡದ ಸಾರಿಗೆ ಸಂಪರ್ಕ ಮ್ಯಾನೇಜರ್ ರಮೇಶ್ ರಾವ್ ಹೇಳಿದ್ದಾರೆ.
ಹೋಟೆಲ್ ನಿಂದ ಮೈದಾನಕ್ಕೆ 6 ಕಿ.ಮೀ ದೂರ ಇತ್ತು. ಸುಮಾರು 9 ಆಟೋರಿಕ್ಷಾ ಬಾಡಿಗೆಗೆ ಪಡೆದು ಮೈದಾನ ತಲುಪಿದೆವು. ಬೇರೆ ಕಡೆ ಇರುವಂತೆ ಇಲ್ಲೂ ಕೂಡಾ ರಿಕ್ಷಾ ಚಾಲಕರು ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟರು. ರಸ್ತೆಗಳು ಕೂಡಾ ಹದಗೆಟ್ಟಿತ್ತು. ಚಾಂಪಿಯನ್ ತಂಡಕ್ಕೆ ಮೈದಾನ ತಲುಪುವುದೇ ಸಾಹಸವಾಗಿಬಿಟ್ಟಿತು.
ನಾಯಕ ವಿನಯ್ ಕುಮಾರ್ ಹಾಗೂ ತರಬೇತುದಾರ ಪ್ರಶಾಂತ್ ಅವರಿದ್ದ ಆಟೋ ಇಂಡಿಯನ್ ಸೂಪರ್ ಲೀಗ್ ಪಂದ್ಯ ನಡೆಯುವ ಫುಟ್ಬಾಲ್ ಸ್ಟೇಡಿಯಂಗೆ ತಲುಪಿತು. ನಂತರ ಆಟೋ ಚಾಲಕ ಕ್ರಿಕೆಟ್ ಸ್ಟೇಡಿಯಂಗೆ ತಂದು ಬಿಟ್ಟ.
ಕ್ಷಮಾಪನೆ: ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ವಿನಯ್ ಕುಮಾರ್, ಅಭಿಮನ್ಯು ಮಿಥುನ್ ರಂಥ ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಈ ರೀತಿ ನಡೆಸಿಕೊಂಡ ತಪ್ಪಿಗೆ ಅಸ್ಸಾಂ ಕ್ರಿಕೆಟ್ ಸಮಿತಿ ಕ್ಷಮಾಪನೆ ಕೇಳಿದೆ. ಸದ್ಯಕ್ಕೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಬಿಸಿಸಿಐಗೆ ದೂರು ದಾಖಲಾಗಿದೆ.
ಹ್ಯಾಟ್ರಿಕ್ ಕಪ್ ಗೆಲ್ಲುವ ನಿರೀಕ್ಷೆಯಲ್ಲಿರುವ ಕರ್ನಾಟಕ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ ಉಪಯೋಗಿಸಿಕೊಳ್ಳಲಿಲ್ಲ. ನಂತರ ಬೌಲಿಂಗ್ ನಲ್ಲಿ ಮಿಂಚಿದರೂ ಎರಡನೇ ಇನ್ನಿಂಗ್ಸ್ ನಲ್ಲಿ ಅಸ್ಸಾಂ ಆಲೌಟ್ ಮಾಡಲು ತಿಣುಕಾಡಬೇಕಾಯಿತು. ವಿಧಿ ಇಲ್ಲದೆ ನಾಯಕ ವಿನಯ್ ಕುಮಾರ್ ಅವರು ಹತ್ತು ಜನ ಬೌಲರ್ ಗಳನ್ನು ಬಳಸಿಕೊಂಡರೂ ಪ್ರಯೋಜನವಾಗಲಿಲ್ಲ.