ಹುಬ್ಬಳ್ಳಿ, ನ.23: ಕೆಪಿಎಲ್ ಟೂರ್ನಿ ನಂತರ ಮತ್ತೊಮ್ಮೆ ಇಲ್ಲಿನ ಕ್ರೀಡಾಂಗಣದಲ್ಲಿ ಕ್ರಿಕೆಟ್ ರಂಗು ಮೂಡಿದೆ. ರಣಜಿ ಟ್ರೋಫಿ ಗ್ರೂಪ್ 'ಎ' ಪಂದ್ಯದಲ್ಲಿ ಸೋಮವಾರ ಕರ್ನಾಟಕ ವಿರುದ್ಧ ಟಾಸ್ ಗೆದ್ದ ದೆಹಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಬೆಸ್ತು ಬಿದ್ದಿದೆ. ಕರ್ನಾಟಕ ಪರ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಹಾಗೂ ರಾಬಿನ್ ಉತ್ತಪ್ಪ ಅವರ ಭರ್ಜರಿ ಶತಕಗಳ ನೆರವಿನಿಂದ ಮೊದಲ ದಿನದ ಅಂತ್ಯಕ್ಕೆ 358/3 ಸ್ಕೋರ್ ಮಾಡಿದೆ.
ಒಡಿಶಾ ವಿರುದ್ಧದ ಪಂದ್ಯದಲ್ಲಿ ಗೆಲುವಿನೊಂದಿಗೆ ಟೂರ್ನಿಯಲ್ಲಿ ಎರಡನೇಗೆಲುವು ದಾಖಲಿಸಿದ್ದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ದೆಹಲಿ ತಂಡಕ್ಕೆ ಆರಂಭದಿಂದಲೇ ಆಘಾತ ನೀಡಿದೆ. [ಬಲಿಷ್ಠ ದೆಹಲಿ ತಂಡವನ್ನು ಬಗ್ಗುಬಡಿದ ಅಸ್ಸಾಂ]
ಆರ್ ಸಮರ್ಥ್ ಅವರು 17ರನ್ ಗಳಿಸಿ ಪವನ್ ಸುಯಾಲ್ ಬೌಲಿಂಗ್ ನಲ್ಲಿ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಜೊತೆಗೂಡಿದ ಮಾಯಾಂಕ್ ಅಗರವಾಲ್ ಹಾಗೂ ರಾಬಿನ್ ಉತ್ತಪ್ಪ ಭರ್ಜರಿ ಪ್ರದರ್ಶನ ನೀಡಿ ದೆಹಲಿ ಬೌಲರ್ಸ್ ಬೆವರಿಳಿಸಿದ್ದಾರೆ.
ಮಾಯಾಂಕ್ ರಾಬಿನ್ ಜುಗಲ್ ಬಂದಿ: ಮಾಯಾಂಕ್ 118ರನ್ (209 ಎಸೆತಗಳು, 19X4), ರಾಬಿನ್ ಉತ್ತಪ್ಪ 148 ರನ್ (141 ಎಸೆತಗಳು, 16x4, 6x6) ನೆರವಿನಿಂದ ಕರ್ನಾಟಕ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ದಿನದ ಅಂತ್ಯಕೆ 358/3 ಸ್ಕೋರ್ ಮಾಡಿದೆ. ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಅವರು ತಲಾ 31 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ. [ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕರ್ನಾಟಕ]
ಕರ್ನಾಟಕ ತಂಡ ಒಡಿಶಾದ ವಿರುದ್ಧ ಗೆಲುವಿನೊಂದಿಗೆ 6 ಪಂದ್ಯಗಳಲ್ಲಿ ಒಟ್ಟು 21 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಗಳಿಸಿದೆ. ದಿಲ್ಲಿ ತಂಡ 7 ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ 24 ಅಂಕ ಗಳಿಸಿ ಅಗ್ರಸ್ಥಾನದಲ್ಲಿದೆ.
ದಿಲ್ಲಿ ವಿರುದ್ಧ ಕರ್ನಾಟಕ ಗೆಲುವು ದಾಖಲಿಸಿದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಕರ್ನಾಟಕ ತಂಡ ಒಡಿಶಾ ಮತ್ತು ರಾಜಸ್ಥಾನ ವಿರುದ್ಧ ಗೆಲುವಿನೊಂದಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಆದರೆ ಗೌತಮ್ ಗಂಭೀರ್ ಪಡೆ ಅಸ್ಸಾಂ ವಿರುದ್ಧ ಸೋಲು ಅನುಭವಿಸಿ ಹಿನ್ನಡೆ ಅನುಭವಿಸಿದೆ.
ಮನೀಷ್ ಪಾಂಡೆ ತಂಡಕ್ಕೆ ವಾಪಸಾಗಿರುವುದು ತಂಡಕ್ಕೆ ಇನ್ನಷ್ಟು ಶಕ್ತಿಯನ್ನು ತುಂಬಿದೆ. ಕೈ ಬೆರಳಿಗೆ ಆಗಿದ್ದ ಗಾಯದ ಕಾರಣದಿಂದಾಗಿ ಕಳೆದ ಎರಡು ಪಂದ್ಯಗಳಲ್ಲಿ ಅವರು ತಂಡದಿಂದ ಹೊರಗುಳಿದಿದ್ದರು. ಬೌಲಿಂಗ್ ವಿಭಾಗ ಸ್ಟುವರ್ಟ್ ಬಿನ್ನಿ ಸೇವೆಯಿಂದ ವಂಚಿತಗೊಂಡಿದೆ. ಬಿನ್ನಿ ಅನುಪಸ್ಥಿತಿಯಲ್ಲಿ ನಾಯಕ ವಿನಯ್ ಕುಮಾರ್ ಅವರು ಶ್ರೇಯಸ್ ಗೋಪಾಲ್ ನೆರವು ಪಡೆಯಲಿದ್ದಾರೆ.
ಕೆಎಸ್ ಸಿಎ ಅಧ್ಯಕ್ಷರಾಗಿ ಮೂರು ಅವಧಿ ಕಾರ್ಯ ನಿರ್ವಹಿಸಿದ್ದ ರಾಮ್ ಪ್ರಸಾದ್ ಆವರು ಬೆಂಗಳೂರಿನಲ್ಲಿ ಸೋಮವಾರ ನಿಧನರಾಗಿದ್ದಾರೆ ಎಂದು ಕೆಎಸ್ ಸಿಎ ಸಂತಾಪ ವ್ಯಕ್ತಪಡಿಸಿದೆ.