ಬೆಂಗಳೂರು, ಜೂನ್ 1: ಕರ್ನಾಟಕದ ಬಿಜೆಪಿಯ ಮಾಜಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೂ ಕ್ರಿಕೆಟ್ ಗೂ ಅದೇನು ನಂಟೋ ಗೊತ್ತಿಲ್ಲ. ಆದರೆ, ಸಾವಿರ ರನ್ ಸರದಾರ, ಉದಯೋನ್ಮುಖ ಆಟಗಾರ ಮಹಾರಾಷ್ಟ್ರದ ಪ್ರಣವ್ ಧನವಾಡೆ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಬಿಸಿಸಿಐ ಅಧ್ಯಕ್ಷ, ಸಂಸದ ಅನುರಾಗ್ ಠಾಕೂರ್ ಅವರಿಗೆ ಪ್ರಣವ್ ಪರವಾಗಿ ಪತ್ರ ಬರೆದಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ಅವರು ಅಂಡರ್ 16ಗೆ ಆಯ್ಕೆಯಾಗಿದ್ದರ ಬಗ್ಗೆ ಅಪಸ್ವರ ಕೇಳಿ ಬಂದಿದ್ದು, ಅರ್ಜುನ್ ಬದಲಿಗೆ ಪ್ರಣವ್ ಧನವಾಡೆ ಆಯ್ಕೆಯಾಗಬೇಕಿತ್ತು ಎಂಬ ಟ್ರಾಲ್, ಮೀಮ್ಸ್, ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. [ಸಚಿನ್ ಪುತ್ರ ಅರ್ಜುನ್ ಡಕ್ ಔಟ್ ಕಥೆ]
ಪ್ರಣವ್ ಆಯ್ಕೆಗೆ ತಾಂತ್ರಿಕ ಸಮಸ್ಯೆ: ಪಶ್ಚಿಮ ವಲಯದ ಆಯ್ಕೆದಾರರಾಗಿದ್ದ ಸಮೀರ್ ದಿಘೆ ಅವರು ಸಚಿನ್ ಅವರ ಆಪ್ತರಾಗಿದ್ದು, ಹೀಗಾಗಿ ಅರ್ಜುನ್ ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ, ಆಯ್ಕೆ ಸಮಯಕ್ಕೆ ಪ್ರಣವ್ ಅವರ ವಯೋಮಿತಿ 16 ವರ್ಷ ಮೀರಿತ್ತು, ತಂಡಕ್ಕೆ ಆಲ್ ರೌಂಡರ್ ಅಗತ್ಯವಿತ್ತು ಎಂದು ಸಮಜಾಯಿಷಿ ಸಿಕ್ಕಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾವುದೇ ಹೇಳಿಕೆ ಇನ್ನೂ ಲಭ್ಯವಿಲ್ಲ.