ಬೊಕರೊ (ಜಾರ್ಖಂಡ್), ಜುಲೈ 15: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಬೆಟ್ಟಿಂಗ್ ಹಾಗೂ ಕಳ್ಳಾಟದ ಬಗ್ಗೆ ನಿವೃತ್ತ ನ್ಯಾ.ಆರ್ ಎಂ ಲೋಧಾ ನೇತೃತ್ವದ ಸಮಿತಿ ತನ್ನ ತೀರ್ಪು ನೀಡುವಾಗ ನಾಯಕ ಎಂಎಸ್ ಧೋನಿ ಏನು ಮಾಡುತ್ತಿದ್ದರು? ಚೆನ್ನೈ ತಂಡ 'ಬ್ಯಾನ್' ಆದಾಗ ಕ್ಯಾಪ್ಟನ್ ಕೂಲ್ ಏನ್ಮಾಡ್ತಾ ಇದ್ದರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 2 ವರ್ಷಗಳ ಐಪಿಎಲ್ ನಿಂದ ನಿಷೇಧ ಹೇರಲಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಆದೇಶ ಹೊರ ಬೀಳುವ ಸಂದರ್ಭದಲ್ಲಿ ನಾಯಕ ಧೋನಿ ಅವರು ವಿದ್ಯಾರ್ಥಿಗಳ ಜೊತೆ ಕ್ರಿಕೆಟ್ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದರು. [ಕುಂದ್ರಾ, ಮೇಯಪ್ಪನ್ ಕ್ರಿಕೆಟ್ ನಿಂದ ಆಜೀವ ನಿಷೇಧ]
ಜುಲೈ 14ರ ಮಂಗಳವಾರ ಜಸ್ಟೀಸ್ ಲೋಧಾ ಸಮಿತಿ ಸಿಎಸ್ ಕೆ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 2 ವರ್ಷಗಳ ಕಾಲ ನಿಷೇಧ ಹೇರಿತು. ಚೆನ್ನೈ ತಂಡದ ಮಾಲೀಕ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನದ ರಾಜ್ ಕುಂದ್ರಾ ಅವರಿಗೆ ಆಜೀವ ನಿಷೇಧ ಹೇರಲಾಯಿತು. ಇಬ್ಬರು 2013ರ ಆವೃತ್ತಿಯ ಐಪಿಎಲ್ ನಲ್ಲಿ ಬೆಟ್ಟಿಂಗ್ ಮಾಡಿರುವ ಆರೋಪ ಸಾಬೀತಾಗಿದೆ.
ಐಪಿಎಲ್ ಅಭಿಮಾನಿಗಳು ಈ ಶಾಕಿಂಗ್ ಸುದ್ದಿ ಓದಿ, ನೋಡಿ, ಕೇಳಿಸಿಕೊಳ್ಳುವ ಹೊತ್ತಿಗೆ ಧೋನಿ ಅವರು ಜಾರ್ಖಂಡ್ ನ ಬೊಕರೋನಲ್ಲಿರುವ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಜೊತೆ ಕಾಲ ಕಳೆಯುತ್ತಿದ್ದರು. [ಅಮಾನತಾದರೂ ಚೆನ್ನೈ ತಂಡ ಐಪಿಎಲ್ ನಲ್ಲಿ ಆಡಬಹುದು]
ಉಕ್ಕಿನ ನಗರಿ ಬೊಕರೋದಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಜೊತೆ ಸಂವಾದ ನಡೆಸಿದ ಧೋನಿ ಅವರು ನಂತರ ಶೇ 100ರಷ್ಟು ಹಾಜರಾತಿ ಹೊಂದಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು ಎಂದು ಸ್ಥಳೀಯ ಪತ್ರಿಕೆಗಳು ಬರೆದಿವೆ.
ಡಿಪಿಎಸ್ ನ ವಿದ್ಯಾರ್ಥಿನಿಯರು ಐಪಿಎಲ್ ಹಗರಣ ಹಾಗೂ ಚೆನ್ನೈ ತಂಡದ ಭವಿಷ್ಯದ ಬಗ್ಗೆ ಧೋನಿ ಅವರನ್ನು ಪ್ರಶ್ನಿಸಲಿಲ್ಲ ಎಂಬುದೇ ಸಮಾಧಾನಕರ ಸಂಗತಿ ಎಂದು ಪತ್ರಿಕೆಗಳಲ್ಲಿ ಹೇಳಲಾಗಿದೆ.
ಈ ನಡುವೆ ಚೆನ್ನೈ ಹಾಗೂ ರಾಜಸ್ಥಾನ ತಂಡಗಳು ನಿಷೇಧಕ್ಕೆ ಒಳಗಾದರೂ ಮುಂದಿನ ಎರಡು ಐಪಿಎಲ್ ಸೀಸನ್ ನಲ್ಲಿ ಹೊಸ ತಂಡ ಅಥವಾ ಅದೇ ತಂಡ ಹೊಸ ಸ್ವರೂಪದೊಂದಿಗೆ ಕಣಕ್ಕಿಳಿದರೆ ಧೋನಿ ಸೇರಿದಂತೆ ಉಭಯ ತಂಡಗಳ ಆಟಗಾರರು ಆಡಬಹುದು ಎಂಬುದು ಅಭಿಮಾನಿಗಳಿಗೆ ಸಂತಸ ತಂದಿದೆ.