ನವದೆಹಲಿ, ಫೆ. 28: ದೇಶಿ ಕ್ರಿಕೆಟ್ ನಲ್ಲಿ ಕರ್ನಾಟಕ ಈ ಬಾರಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಅದರೆ, ರಾಜ್ಯಾ ಆಟಗಾರರು ಉತ್ತಮ ಆಟದ ಮೂಲಕ ಆಯ್ಕೆದಾರರ ಗಮನ ಸೆಳೆಯುತ್ತಿದ್ದಾರೆ. ಕರ್ನಾಟಕದ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ, ಕರುಣ್ ನಾಯರ್ ಅವರು ಭಾರತದ ಉಳಿದವರ ತಂಡ(Rest of India) ತಂಡಕ್ಕೆ ಆಯ್ಕೆಯಾಗಿದ್ದಾರೆ.
ರಣಜಿ ಚಾಂಪಿಯನ್ ಮುಂಬೈ ವಿರುದ್ಧ ನಮನ್ ಓಜಾ ನಾಯಕತ್ವದ 15 ಸದಸ್ಯರ ಶೇಷ ಭಾರತ ತಂಡ ಆಡಲಿದೆ. ಈ ಬಾರಿಯ ರಣಜಿ ಚಾಂಪಿಯನ್ ಮುಂಬೈ ವಿರುದ್ಧ ಮಾರ್ಚ್ 6 ರಿಂದ 10 ರವರೆಗೆ ಇರಾನಿ ಕಪ್ ನಡೆಯಲಿದೆ. ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರೆಬೊರ್ನ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ.[ಭಾರತ 'ಎ' ತಂಡದ ಮಾನ ಕಾಪಾಡಿದ ಕರುಣ್ ನಾಯರ್]
ರಣಜಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಮೂರು ದಿನಗಳಲ್ಲೇ ಮಣಿಸಿ 21 ರನ್ ಗಳ ಅಂತರದ ಜಯ ದಾಖಲಿಸಿದ ಮುಂಬೈ 41ನೇ ಬಾರಿಗೆ ರಣಜಿ ಚಾಂಪಿಯನ್ ಎನಿಸಿಕೊಂಡಿದೆ.
ಶೇಷ ಭಾರತ ತಂಡ: ಕೆಎಸ್ ಭರತ್, ಫೈಯಾಜ್ ಫಜಲ್, ಕರುಣ್ ನಾಯರ್, ಶೆಲ್ಡನ್ ಜಾಕ್ಸನ್, ನಮನ್ ಓಜಾ (ನಾಯಕ), ಸ್ಟುವರ್ಟ್ ಬಿನ್ನಿ, ಶಾಬಾಜ್ ನದೀಮ್ ಜಯಂತ್ ಯಾದವ್, ನಾಥು ಸಿಂಗ್, ಜೈದೇವ್ ಉನಾದ್ಕತ್, ಬರೀಂದರ್ ಸರ್ನ್, ಕೃಷ್ಣ ದಾಸ್, ಸುದೀಪ್ ಚಟರ್ಜಿ, ಇಯಾನ್ ದೇವ್ ಸಿಂಗ್, ಅಕ್ಷಯ್ ವಾಖರೆ.