ಹುಬ್ಬಳ್ಳಿ, ಸೆ.20: ಮಾಯಾಂಕ್ ಅಗರವಾಲ್ ಹಾಗೂ ವಿನಯ್ ಕುಮಾರ್ ಅವರು 65 ಎಸೆತಗಳಲ್ಲಿ 81 ರನ್ ಜೊತೆಯಾಟ ಕಲೆ ಹಾಕುವ ಮೂಲಕ ಬೆಳಗಾವಿ ಪ್ಯಾಂಥರ್ಸ್ ತಂಡಕ್ಕೆ ನಮ್ಮ ಶಿವಮೊಗ್ಗ ವಿರುದ್ಧ ಸುಲಭ ಜಯ ದೊರೆಕಲು ನೆರವಾದರು.
[In Pics : ಕರ್ನಾಟಕ ಪ್ರೀಮಿಯರ್ ಲೀಗ್]
ಇಲ್ಲಿನ ರಾಜನಗರದ ಕೆಎಸ್ ಸಿಎ ಸ್ಟೇಡಿಯಂನಲ್ಲಿ ಮಂಗಳವಾರ(ಸೆಪ್ಟೆಂಬರ್ 20) ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಐದನೇ ಆವೃತ್ತಿಯ ಟಿ20 ಪಂದ್ಯದಲ್ಲಿ ಶಿವಮೊಗ್ಗ ತಂಡವನ್ನು ಬೆಳಗಾವಿ 8 ವಿಕೆಟ್ ಗಳಿಂದ ಸೋಲಿಸಿದೆ.
ಬೆಳಗಾವಿ ಇನ್ನಿಂಗ್ಸ್: 126 ರನ್ ಸುಲಭ ಮೊತ್ತವನ್ನು ಚೇಸ್ ಮಾಡಿದ ಬೆಳಗಾವಿ ತಂಡ 16.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.4ಓವರ್ ಗಳಲ್ಲಿ 19 ರನ್ನಿತ್ತು 4 ವಿಕೆಟ್ ಪಡೆದ ಪ್ರವೀಣ್ ದುಬೆ ಪಂದ್ಯಶ್ರೇಷ್ಠ ಎನಿಸಿದರು ಜೊತೆಗೆ ಪರ್ಪಲ್ ಕ್ಯಾಪ್ ಧರಿಸಿದರು.
ಮಯಾಂಕ್ ಅಗರವಾಲ್ 69 ರನ್ (47 ಎಸೆತಗಳು, 5X4, 2X6) ಗಳಿಸಿ ಅಜೇಯರಾಗಿ ಉಳಿದರೆ, ವಿನಯ್ ಕುಮಾರ್ 40 ರನ್ (37 ಎಸೆತಗಳು, 4x4, 1x6) ಗಳಿಸಿ ಔಟಾದರು. ಶೋಯಿಬ್ ಮ್ಯಾನೇಜರ್ 14 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
ನಮ್ಮ ಶಿವಮೊಗ್ಗ: ಬೆಳಗಾವಿ ನಾಯಕ ವಿನಯ್ ಕುಮಾರ್ ಅವರ ಬೌಲಿಂಗ್ ನೇತೃತ್ವದಲ್ಲಿ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ನಮ್ಮ ಶಿವಮೊಗ್ಗ ರನ್ ಗಳಿಸಲು ತಿಣುಕಾಡಿತು. ಸಾದಿಕ್ ಕಿಮಾರ್ನಿ ಕೇವಲ 1 ರನ್ ಗಳಿಸಿ ಔಟಾದರೆ, ನಾಯಕ ಸ್ಟುವರ್ಟ್ ಬಿನ್ನಿ 29, ಪವನ್ ದೇಶಪಾಂಡೆ 23, ಜೀಶನ್ ಅಲಿ 21, ಸಿದ್ಧಾಂತ್ ಹಾಗೂ ನಿಕಿನ್ ತಲಾ 14 ರನ್ ಗಳಿಸಿದರು. 125ಸ್ಕೋರಿಗೆ ತಂಡ ಆಲೌಟ್ ಆಯಿತು. ಪ್ರವೀಣ್ 4, ಅಭಿಶೇಕ್ 2, ವಿನಯ್, ಶರತ್, ಪ್ರದೀಪ್ ತಲಾ ಒಂದು ವಿಕೆಟ್ ಪಡೆದರು. (ಒನ್ಇಂಡಿಯಾ ಸುದ್ದಿ)