ನಾಗಪುರ, ಡಿಸೆಂಬರ್ 07 : ಮುಂಬೈ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ವಿನಯ್ ಕುಮಾರ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
ನಾಗಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 4ನೇ ಕ್ವಾಟರ್ ಫೈನಲ್ ಟಿಸ್ಟ್ ಪಂದ್ಯದ ಮೊದಲ ದಿನದ ಮೊದಲ ಸೆಷನ್ನಲ್ಲಿಯೇ ವಿನಯ್ ಕುಮಾರ್ ಅವರು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ.
ವಿನಯ್ ಕುಮಾರ್ ಗಳಿಸಿದ ಹ್ಯಾಟ್ರಿಕ್ ರಾಜ್ಯ ರಣಜಿ ತಂಡ ಗಳಿಸಿದ 10ನೇ ಹ್ಯಾಟ್ರಿಕ್ ವಿಕೆಟ್ ಆಗಿದೆ. ಆ ಮೂಲಕ ಅತಿ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ ರಣಜಿ ತಂಡ ಎಂಬ ಹಿರಿಮೆಗೆ ಮತ್ತೊಂದು ಗರಿಯನ್ನು ಕರ್ನಾಟಕ ಸೇರಿಸಿಕೊಂಡಿದೆ. 6 ಬಾರಿ ಹ್ಯಾಟ್ರಿಕ್ ಗಳಿಸಿರುವ ಬಂಗಾಳ ತಂಡ ಎರಡನೇ ಸ್ಥಾನದಲ್ಲಿದೆ.
ವಿನಯ್ ಕುಮಾರ್ ಅವರು ಮುಂಬೈ ವಿರುದ್ಧ ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಮುಂಚೆ ಯಾವ ರಣಜಿ ತಂಡದ ಆಟಗಾರರೂ ಪ್ರಭಲ ಬ್ಯಾಟಿಂಗ್ ಹೊಂದಿರುವ ಮುಂಬೈ ವಿರುದ್ಧ ಹ್ಯಾಟ್ರಿಕ್ ಗಳಿಸಲು ಸಾಧ್ಯವಾಗಿರಲಿಲ್ಲ.
100ನೇ ರಣಜಿ ಟೆಸ್ಟ್ ಪಂದ್ಯ ಆಡುತ್ತಿರುವ ವಿನಯ್ ಕುಮರ್ ಅವರಿಗೆ ಇದು ಮೊದಲ ಹ್ಯಾಟ್ರಿಕ್ ವಿಕೆಟ್ ಆಗಿದೆ. ಇಂದು (ಡಿಸೆಂಬರ್ 07) ತಾವು ಹಾಕಿದ ಮೊದಲ ಓವರ್ನ ಕೊನೆಯ ಬಾಲಿನಲ್ಲಿ ಮುಂಬೈ ತಂಡದ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಅವರ ವಿಕೆಟ್ ಕಬಳಿಸಿದರು. ಪೃಥ್ವಿ ಷಾ (2) ಅವರು ಭಾರತದ 19 ವರ್ಷದೊಳಗಿನ ವರ್ಲ್ಡ ಕಪ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ನಂತರ ತಾವು ಹಾಕಿದ ಎರಡನೇ ಓವರ್ ನ ಮೊದಲ ಬಾಲಿನಲ್ಲಿ ಬಿಸ್ಟಾ (1) ಅವರನ್ನು ಔಟ್ ಮಾಡಿದರು, ನಂತರದ ಬಾಲಿನಲ್ಲಿ ಆಕಾಶ್ ಪರ್ಕರ್(0) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಈ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಕರ್ನಾಟಕದ 10ನೇ ಬೌಲರ್ ಹಾಗೂ ಒಟ್ಟು ರಣಜಿ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ 75ನೇ ಬೌಲರ್ ಎನಿಸಿಕೊಂಡರು ವಿನಯ್ ಕುಮಾರ್.
ಮುಂಬೈ ವಿರುದ್ಧದ 4ನೇ ಕ್ವಾಟರ್ ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿರುವ ಕರ್ನಾಟಕ ತಂಡ ಮೇಲುಗೈ ಸಾಧಿಸಿದೆ. ಊಟದ ವಿರಾಮದ ಹೊತ್ತಿಗೆ ಮುಂಬೈ ತಂಡ 30 ಓವರ್ ಆಡಿ 90 ರನ್ ಗಳಿಸಿ ತನ್ನ ಅತಿ ಪ್ರಮುಖ 7 ವಿಕೆಟ್ ಕಳೆದುಕೊಂಡಿದೆ. ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಹೆರ್ವಾಡ್ಕರ್ 28 ರನ್ ಗಳಿಸಿ ಸ್ಕ್ರೀಸ್ ನಲ್ಲಿದ್ದಾರೆ.
ವೇಗದ ಬೌಲಿಂಗ್ಗೆ ನೆರವು ನೀಡುತ್ತಿರುವ ಪಿಚ್ ನಲ್ಲಿ ವಿನಯ್ ಕುಮಾರ್ 4 ವಿಕೆಟ್ ಕಬಳಿಸಿದ್ದಾರೆ, ಅಭಿಮನ್ಯು ಮಿತುನ್, ಶ್ರೀನಾಥ್ ಅರವಿಂದ್, ಕೃಷ್ಣಪ್ಪ ಗೌತಮ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.