ಹೈದರಾಬಾದ್, ಏಜೆನ್ಸಿ 17: ವೇಗದ ಬೌಲರ್ ಭುವನೇಶ್ವರ್ ಕುಮಾರ್ (4 ಓವರ್, 19 ರನ್, 5 ವಿಕೆಟ್) ಅವರ ವೇಗದ ಬೌಲಿಂಗ್ ಗೆ ತತ್ತರಿಸಿದ ಪಂಜಾಬ್ ತಂಡ, ಸೋಮವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 5 ರನ್ ಗಳ ಸೋಲು ಅನುಭವಿಸಿತು.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ, 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಪಂಜಾಬ್ 19.4 ಓವರ್ ಗಳಲ್ಲಿ 154 ರನ್ ಗಳಿಗೆ ಆಲೌಟ್ ಆಯಿತು.[ಸ್ಕೋರ್ ಕಾರ್ಡ್]
ಪಂದ್ಯ ಆರಂಭಕ್ಕೂ ಮುನ್ನ, ಟಾಸ್ ಗೆದ್ದಿದ್ದ ಪಂಜಾಬ್ ತಂಡ, ಮೊದಲಿಗೆ ಆತಿಥೇಯರಿಗೆ ಬ್ಯಾಟಿಂಗ್ ನಡೆಸಲು ಆಮಂತ್ರಣ ನೀಡಿತು. ಅದರಂತೆ ಮೊದಲು ಬ್ಯಾಟಿಂಗ್ ಗೆ ಇಳಿದ ಹೈದರಾಬಾದ್ ತಂಡವು, ಪಂಜಾಬ್ ತಂಡದ ಮೊನಚು ಬೌಲಿಂಗ್ ಗೆ ತತ್ತರಿಸಿತು.
ಆರಂಭಿಕ ಶಿಖರ್ ಧವನ್ (15) ಸೇರಿದಂತೆ ಮಧ್ಯಮ ಕ್ರಮಾಂಕದ ಹೆನ್ರಿಕ್ಸ್ (9), ಯುವರಾಜ್ ಸಿಂಗ್ (0), ದೀಪಕ್ ಹೂಡಾ (12) ಬೇಗನೇ ವಿಕೆಟ್ ಚೆಲ್ಲಿದರು. ಆದರೂ, ಮತ್ತೊಬ್ಬ ಆರಂಭಿಕ ಹಾಗೂ ನಾಯಕ ಡೇವಿಡ್ ವಾರ್ನರ್ (ಅಜೇಯ 70 ರನ್, 54 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ನಮನ್ ಓಜಾ (34 ರನ್, 20 ಎಸೆತ, 2 ಬೌಂಡರಿ, 1 ಸಿಕ್ಸರ್) ಅವರ ಆಕರ್ಷಕ ಬ್ಯಾಟಿಂಗ್ ಸಹಾಯದಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.[ಅಂಕ ಪಟ್ಟಿ]
ಹುಸಿಯಾದ ನಿರೀಕ್ಷೆ: ಹೈದರಾಬಾದ್ ತಂಡವನ್ನು ಸುಮಾರಾದ ಮೊತ್ತಕ್ಕೆ ನಿಯಂತ್ರಿಸಿದ ಖುಷಿಯಲ್ಲಿದ್ದ ಪಂಜಾಬ್ ತಂಡಕ್ಕೆ ಆ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. ಆರಂಭಿಕ ಹಾಷೀಂ ಆಮ್ಲಾ (0) ಸೇರಿದಂತೆ, ಪ್ರಮುಖ ಬ್ಯಾಟ್ಸ್ ಮನ್ ಗಳಾದ ಮ್ಯಾಕ್ಸ್ ವೆಲ್ (10), ಇಯಾನ್ ಮೋರ್ಗನ್ (13), ಡೇವಿಡ್ ಮಿಲ್ಲರ್ (1), ವೃದ್ಧಿಮಾನಾ ಸಾಹಾ (0) ವಿಫಲರಾದರು.
ಆದರೆ, ಆರಂಭಿಕ ಮನನ್ ವೊಹ್ರಾ ಅವರೊಬ್ಬರೇ ಕ್ರೀಸ್ ನಲ್ಲಿ ಗಟ್ಟಿಯಾಗಿ ಕಚ್ಚಿಕೊಂಡು ಬ್ಯಾಟ್ ಬೀಸಿದರೂ ಅವರಿಗೆ ಇತರ ಬ್ಯಾಟ್ಸ್ ಮನ್ ಗಳಿಂದ ಬೆಂಬಲ ಸಿಗಲಿಲ್ಲ. ಅಂತಿಮ ಹಂತದಲ್ಲಿ, (19ನೇ ಓವರ್ ನಲ್ಲಿ) ಅವರು 95 ರನ್ ಗಳಿಸಿ (50 ಎಸೆತ, 9 ಬೌಂಡರಿ, 5 ಸಿಕ್ಸರ್) ವಿಕೆಟ್ ಪತನಗೊಂಡಿತು.
ಆದರೆ, ಅಷ್ಟರಲ್ಲಿ ಕಡೆಯ 1 ಓವರ್ ನಲ್ಲಿ 11 ರನ್ ಪೇರಿಸುವ ಹಾಗೂ ಕೈಯ್ಯಲ್ಲಿ ಒಂದೇ ವಿಕೆಟ್ ಉಳಿಸಿಕೊಂಡು ಹೋರಾಡಬೇಕಾದ ಒತ್ತಡಕ್ಕೆ ಪಂಜಾಬ್ ಸಿಲುಕಿತು. ಈ ಓವರ್ ಅಂತ್ಯದ ಹೊತ್ತಿಗೆ 3 ಎಸೆತಗಳಲ್ಲಿ 6 ರನ್ ಪೇರಿಸುವ ಅಗತ್ಯವಿದ್ದ ಪಂಜಾಬ್ ಪರ ಕ್ರೀಸ್ ನಲ್ಲಿದ್ದ ಇಶಾಂತ್ ಶರ್ಮಾ, 4ನೇ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಪಂಜಾಬ್ ಇನಿಂಗ್ಸ್ ಗೆ ತೆರೆಬಿತ್ತು. ಈ ಮೂಲಕ, ಪಂಜಾಬ್ ತಂಡ 5 ರನ್ ಗಳ ಪರಾಭವ ಹೊಂದಿತು.
ಪಂದ್ಯಶ್ರೇಷ್ಠ ಭುವಿ: ವೇಗದ ಬೌಲರ್ ಭುವನೇಶ್ವರ್ ಅವರು, ಆಮ್ಲಾ, ವೊಹ್ರಾ, ಮ್ಯಾಕ್ಸ್ ವೆಲ್, ಮೋಹಿತ್ ಶರ್ಮಾ ಹಾಗೂ ಕೆಸಿ ಕಾರಿಯಪ್ಪ ವಿಕೆಟ್ ಕಬಳಿಸಿ ಮಿಂಚಿದರು. ಹೀಗೆ, ಪ್ರಮುಖ ಬ್ಯಾಟ್ಸ್ ಮನ್ ಗಳ ಜತೆಗೆ ಪಂಜಾಬ್ ತಂಡದ ಪರವಾಗಿ ಕ್ರೀಸ್ ಕಚ್ಚಿಕೊಂಡು 95 ರನ್ ಗಳಿಸಿ ಸನ್ ರೈಸರ್ಸ್ ಗೆಲವಿಗೆ ಅಡ್ಡಿಯಾಗಿದ್ದ ವೊಹ್ರಾ ವಿಕೆಟ್ ಉರುಳಿಸುವ ಮೂಲಕ ಅವರು ಪಂದ್ಯಕ್ಕೆ ತಿರುವು ತಂದರು. ಈ ಕಾರಣಕ್ಕಾಗಿಯೇ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.