ಬೆಂಗಳೂರು, ಮೇ 17 : ವಿಶ್ವದ ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಸೌರ ವಿದ್ಯುತ್ ಬಳಸುವ, ಸೂಪರ್ ಸಾಪರ್ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ. ಆದರೆ, ಮಳೆಯ ಕಾಟಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳು ತತ್ತರಿಸಿವೆ.
ಪ್ಲೇ ಆಫ್ ನ ಎಲಿಮಿನೇಟರ್, ಕ್ವಾಲಿಫೈಯರ್ 2ನೇ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಯಾವ ತಂಡಕ್ಕೆ ಲಾಭ? ಮಳೆ ನಿಯಮ ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ? ಮುಂದೆ ಓದಿ...
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 25ರಂದು ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಲೀಗ್ ಪಂದ್ಯ ಮಳೆಗೆ ಆಹುತಿಯಾಗಿತ್ತು. ಲೀಗ್ ಪಂದ್ಯವಾದ್ದರಿಂದ ಎರಡು ತಂಡಕ್ಕೆ ತಲಾ ಒಂದು ಅಂಕ ಲಭ್ಯವಾಗಿತ್ತು.
ಆದರೆ, ಮೇ 17ರ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದ ವಿಜೇತರು ಆಡುವ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಭೀತಿ ಆವರಿಸಿದೆ.
ಬುಧವಾರದ(ಮೇ 17) ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 128/7 ಸ್ಕೋರ್ ಮಾಡಿದೆ. ಆದರೆ, ಕೆಕೆಆರ್ ತಂಡ ರನ್ ಚೇಸ್ ಮಾಡಲು ಮಳೆ ಅಡ್ಡಿಪಡಿಸುತ್ತಿದೆ.
* ಪ್ಲೇ ಆಫ್ ನ ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ 2 ಪಂದ್ಯಗಳಿಗೆ ಯಾವುದೇ ಬದಲಿ ದಿನವನ್ನು ನಿಗದಿ ಮಾಡಿಲ್ಲ. ಅಂಕ ಹಂಚಿಕೆಯಂತೂ ಸಾಧ್ಯವಿಲ್ಲ.
* ಒಂದು ವೇಳೆ ಎರಡೂ ಪಂದ್ಯಗಳು ಮಳೆಯಿಂದ ಸಂಪೂರ್ಣ ವಾಶ್ ಔಟ್ ಆದರೆ, ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಂಡವು ಫೈನಲ್ ಪ್ರವೇಶಿಸಲಿದೆ.
* ಎಲಿಮಿನೇಟರ್ ಪಂದ್ಯ(ಮೇ 17) ಒಂದು ಇನ್ನಿಂಗ್ಸ್ ಮುಗಿದಿದೆ. ಕೆಕೆಆರ್ ತಂಡ ಸಂಪೂರ್ಣ 20 ಓವರ್ ಆಡಲು ಸಾಧ್ಯವಾಗದಿದ್ದರೆ ಕನಿಷ್ಠ 5 ಓವರ್ ಅಥವಾ ಸೂಪರ್ ಓವರ್ ಪಂದ್ಯದ ಮೂಲಕ ಫಲಿತಾಂಶ ನಿರ್ಧರಿಸಲಾಗುತ್ತದೆ. ಇದು ಕೂಡಾ ಸಾಧ್ಯವಾಗದಿದ್ದರೆ, ಲೀಗ್ ಹಂತದ ಅಂಕಪಟ್ಟಿ ಎಣಿಕೆ ನೋಡಲಾಗುತ್ತದೆ.
* ಲೀಗ್ ಹಂತದ ನಂತರ 3ನೇ ಸ್ಥಾನ ಪಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಕೆಕೆಆರ್ 4ನೇ ಸ್ಥಾನ ಪಡೆದಿದ್ದರಿಂದ ಅವಕಾಶಗಳು ಕಡಿಮೆ.
* ಒಂದುವೇಳೆ ಕ್ವಾಲಿಫೈಯರ್2 ಕೂಡಾ ಮಳೆಗೆ ಸಂಪೂರ್ಣ ಆಹುತಿಯಾದರೆ ಮುಂಬೈ ತಂಡ 20 ಅಂಕ ಪಡೆದಿದ್ದು, ಫೈನಲ್ ಗೆ ಹೋಗುವ ಅರ್ಹತೆ ಪಡೆಯಲಿದೆ.