ಹೈದರಾಬಾದ್, ಏಪ್ರಿಲ್ 07: ವಿಶ್ವ ಟ್ವೆಂಟಿ20 ಟೂರ್ನಮೆಂಟ್ ವೇಳೆ ಗಾಯಾಳುವಾಗಿ ಟೂರ್ನಿಯಿಂದ ಹೊರನಡೆದಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಅಭಿಮಾನಿಗಳಿಗೆ ಮತ್ತೆ ಆಘಾತವಾಗಿದೆ. ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ಯುವರಾಜ್ ಅವರು ಇನ್ನೊಂದಿಷ್ಟು ಕಾಲ ಮೈದಾನದಿಂದ ಹೊರಗುಳಿಯುವಂತೆ ವೈದ್ಯರು ಖಡಕ್ ಆಗಿ ಸೂಚಿಸಿದ್ದಾರೆ.
ಎಡಗೈ ಆಲ್ ರೌಂಡರ್ ಯುವರಾಜ್ ಅವರು ಐಸಿಸಿ ವಿಶ್ವ ಟ್ವೆಂಟಿ20 ಟೂರ್ನಮೆಂಟ್ (ಮಾರ್ಚ್ 27ರ ಆಸ್ಟ್ರೇಲಿಯಾ ವಿರುದ್ಧ) ನಲ್ಲಿ ಪಾದಕ್ಕೆ ಗಾಯ ಮಾಡಿಕೊಂಡು ಮಾರ್ಚ್ 31ರ ವೆಸ್ಟ್ ಇಂಡೀಸ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದರು.
ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುತ್ತಿರುವ ಯುವರಾಜ್ ಸಿಂಗ್ ಅವರು ಇನ್ನು 2 ವಾರಗಳ ಕಾಲ ಮೈದಾನಕ್ಕೆ ಇಳಿಯುವಂತಿಲ್ಲ ಎಂದು ಮುಖ್ಯ ಕೋಚ್ ಟಾಮ್ ಮೂಡಿ ಹೇಳಿದ್ದಾರೆ.
ಯುವರಾಜ್ ಅವರನ್ನು 7 ಕೋಟಿ ರು ನೀಡಿ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೊಂಡು ಕೊಂಡಿತ್ತು. ಯುವರಾಜ್ ಸಿಂಗ್ ಹಾಗೂ ದೀಪಕ್ ಹೂಡಾ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಹೊಂದುವ ಮೂಲಕ ಬ್ಯಾಟಿಂಗ್ ಶಕ್ತಿ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಮೂಡಿ ಹೇಳಿದರು.
ಆದಿತ್ಯಾ ತಾರೆ, ತಿರುಮಲಸೆಟ್ಟಿ ಸುಮನ್ ರಂಥ ಅನುಭವಿ ಐಪಿಎಲ್ ಆಟಗಾರರು ತಂಡದಲ್ಲಿ ದ್ದಾರೆ. ಯುವರಾಜ್ ಅವರ ಅನುಪಸ್ಥಿತಿ ತಂಡವನ್ನು ಕೆಲ ಕಾಲ ಕಾಡಲಿದೆ. ಟಾಪ್ 4 ತಂಡವಾಗಿ ಹೊರಹೊಮ್ಮುವುದು ನಮ್ಮ ಸದ್ಯದ ಗುರಿ ಎಂದು ಮೂಡಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಾಯಕತ್ವದ ಸನ್ ರೈಸರ್ಸ್ ತಂಡ ಏಪ್ರಿಲ್ 9 ರಿಂದ ಮೇ 29ರ ತನಕ ನಡೆಯಲಿರುವ ಐಪಿಎಲ್ 9ರಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ಬೆಂಗಳೂರಿನಲ್ಲಿ ಏಪ್ರಿಲ್ 12ರಂದು (8 PM) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ವಿರುದ್ಧ ಮೊದಲ ಪಂದ್ಯವಾಡಲಿದೆ. (ಒನ್ಇಂಡಿಯಾ ಸುದ್ದಿ)