ಬೆಂಗಳೂರು, ಮೇ 24 : ಕಿತ್ತಲೆ ಟೋಪಿವಾಲ, 'ಬ್ಯಾಟ್ ಮನ್' ವಿರಾಟ್ ಕೊಹ್ಲಿ ಡಕ್ ಔಟ್, ಕ್ರಿಸ್ ಗೇಲ್, ಕೆಎಲ್ ರಾಹುಲ್ ಎಲ್ಲಾ ಪೆವಿಲಿಯನ್ ಪೆರೇಡ್. . . ಮುಗಿಯಿತು ಆರ್ ಸಿಬಿ ಕತೆ ಎನ್ನುವಷ್ಟರಲ್ಲೇ ಫೀನಿಕ್ಸ್ ಹಕ್ಕಿಯಂತೆ ಬೆಂಗಳೂರಿನ ತಂಡ ಮೇಲಕ್ಕೆದ್ದು ಅಂತಿಮ ಹಣಾಹಣಿಯತ್ತ ಹಾರಿದೆ. []
ಗುಜರಾತ್ ಲಯನ್ಸ್ ನೀಡಿದ್ದ ಗುರಿಯನ್ನು ಮೆಟ್ಟಿ ನಿಲ್ಲಲು ಎಬಿ ಡಿ ವಿಲಿಯರ್ಸ್ ಎಂಬ 'ಸೂಪರ್ ಮ್ಯಾನ್' ಹಾಗೂ ಇಕ್ಬಾಲ್ ಅಬ್ದುಲ್ಲಾ ಬ್ಯಾಟಿಂಗ್ ಪ್ಯಾಕೇಜ್ ಕಾರಣವಾಗಿದೆ. ಆರ್ ಸಿಬಿ ಐಪಿಎಲ್ 9 ರ ಫೈನಲ್(ಮೇ 29 ರಂದು ಬೆಂಗಳೂರಿನಲ್ಲಿ) ತಲುಪಿದ ಮೊದಲ ತಂಡವೆನಿಸಿ ಜಯಭೇರಿ ಬಾರಿಸಿದೆ.
ಎಬಿಡಿ ಜವಾಬ್ದಾರಿಯುತ ಬ್ಯಾಟಿಂಗ್ ಗೆ ಮೊದಲಿಗೆ ಸ್ಟುವರ್ಟ್ ಬಿನ್ನಿ 15 ಎಸೆತಗಳಲ್ಲಿ 21 ರನ್ ಗಳಿಸಿ ಸಾಥ್ ನೀಡಿದರೆ, ಅಂತಿಮ ಹಂತದ ತನಕ ಸ್ಪಿನ್ನರ್ ಇಕ್ಬಾಲ್ ಅಬ್ದುಲ್ಲಾ 25 ಎಸೆತಗಳಲ್ಲಿ 33 ರನ್ (3x4, 1X6) ಗಳಿಸಿ ಜೊತೆಯಾದರು.
ಗುಜರಾತ್ ಇನ್ನಿಂಗ್ಸ್: ಮೊದಲು ಬ್ಯಾಟಿಂಗ್ ಅವಕಾಶ ಸಿಕ್ಕರೂ ಲಯನ್ಸ್ ಘರ್ಜಿಸಲಿಲ್ಲ. ಅಬ್ದುಲ್ಲಾ ಆರಂಭಿಕರನ್ನು ಪೆವಿಲಿಯನ್ ಗೆ ಕಳಿಸಿದಾಗ ತಂಡದ ಮೊತ್ತ 6 ರನ್ ದಾಟಿರಲಿಲ್ಲ.
ನಾಯಕ ಸುರೇಶ್ ರೈನಾ 1 ರನ್ ಗಳಿಸಿ ಔಟಾದಾಗ ಸ್ಕೋರ್ ಕೇವಲ 9 ರನ್. ನಂತರ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹಾಗೂ ಸ್ಮಿತ್ ಜೊತೆಯಾಟ ಲಯನ್ಸ್ ಗೆ ಬಲ ತಂದಿತು.
26 ರನ್ ಗಳಿಸಿ ಕಾರ್ತಿಕ್ ಔಟಾದ ಮೇಲೆ 94 ರನ್ನಿಗೆ 4 ವಿಕೆಟ್ ಕಳೆದುಕೊಂಡ ಲಯನ್ಸ್ ಗೆ ಡ್ವಾಯ್ನೆ ಸ್ಮಿತ್ 73 ರನ್ (41 ಎಸೆತಗಳು, 5x4,6x6) ಗಳಿಸಿ ಆಸರೆಯಾದರು.
20 ಓವರ್ ಗಳಲ್ಲಿ 158 ರನ್ ಗಳಿಸಿತು. ಆರ್ ಸಿಬಿ ಪರ ಅಬ್ದುಲ್ಲಾ, ಜೋರ್ಡನ್ ತಲಾ 2 ವಿಕೆಟ್, ಚಾಹಲ್ 1 ವಿಕೆಟ್ ಪಡೆದರೆ, 4 ವಿಕೆಟ್ ಕಿತ್ತ ಶೇನ್ ವಾಟ್ಸನ್ ಪರ್ಪಲ್ ಕ್ಯಾಪ್ ಧರಿಸಿದರು.(ಒನ್ಇಂಡಿಯಾ ಸುದ್ದಿ)