ಮೊಹಾಲಿ, ಮೇ.13: ಟಾಸ್ ಸಮಯದಲ್ಲೇ 180 ಬೇಕಾದರೂ ಚೇಸ್ ಮಾಡುತ್ತೇವೆ ಎಂದು ಜಾರ್ಜ್ ಅವರ ತಂಡ ಅಷ್ಟು ರನ್ ಪೇರಿಸಲಿ ಎಂದು ಸವಾಲು ಹಾಕಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಕೊಹ್ಲಿ ಅಹಂಕಾರಕ್ಕೆ ಸರಿಯಾದ ಪೆಟ್ಟು ಬಿದ್ದಿದೆ. ಪಂಜಾಬಿಗಳ ವಿರುದ್ಧ ಆರ್ ಸಿಬಿ ಸೋತು ಸುಣ್ಣವಾಗಿದೆ. ಪ್ಲೇ ಆಫ್ ಹಂತ ತಲುಪಲು ಈಗ ತಿಣುಕಾಡಬೇಕಾಗಿದೆ.
ಆರ್ ಸಿಬಿ ತಂಡಕ್ಕೆ ಒಮ್ಮೆ ಅನುಕೂಲಕರವಾಗಿದ್ದ ಮಳೆ ಬುಧವಾರದಂದು ಮಾರಕವಾಯಿತು. 20 ಓವರ್ ಗಳ ಪಂದ್ಯ 10 ಓವರ್ ಗಳಿಗೆ ಸೀಮಿತವಾಯಿತು.
ಮೊದಲು ಫೀಲ್ಡಿಂಗ್ ಮಾಡಿದ ಕೊಹ್ಲಿ ಪಡೆ ಅನಗತ್ಯ ರನ್ ಕೊಟ್ಟು 106/6 ಹೊಡೆಸಿಕೊಂಡರು. ಇದಕ್ಕೆ ಉತ್ತರವಾಗಿ ರನ್ ಚೇಸ್ ಮಾಡುವ ಸರಿಯಾದ ಯೋಜನೆಯಿಲ್ಲದೆ ಕಣಕ್ಕಿಳಿದು 22ರನ್ ಗಳಿಂದ ಪಂದ್ಯ ಬಿಟ್ಟುಕೊಟ್ಟಿತು.ಕಿಂಗ್ಸ್ XI ಪರ ಅಕ್ಷರ್ ಪಟೇಲ್ ಆಲ್ರೌಂಡ್ ಆಟ, ವೃದ್ಧಿಮಾನ್ ಸಹಾ ಚಿನಕುರಣಿ ಬ್ಯಾಟಿಂಗ್ ಗೆಲುವಿಗೆ ಕಾರಣವಾಯಿತು.
ಆರ್ ಸಿಬಿ ಆರಂಭ ಉತ್ತಮವಾಗಿತ್ತು. ನಾಯಕ ಕೊಹ್ಲಿ 9 ಎಸೆತಗಳಲ್ಲಿ 19 ರನ್ ಗಳಿಸಿದರು 2 ಬೌಂಡರಿ, 1 ಸಿಕ್ಸ್ ಸಿಡಿಸಿದ ಪೆವಿಲಿಯನ್ ಸೇರಿದರು. ಇನ್ನೊಂದು ತುದಿಯಲ್ಲಿ ಗೇಲ್ 17ರನ್ (14ಎಸೆತ) ಗಳಿಸಿ ಸಂದೀಪ್ ಸಿಂಗ್ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಎಬಿ ಡಿವಿಲೆಯರ್ಸ್ 10 ರನ್ ಗಳಿಸಿದರೆ, ಮನದೀಪ್ ಸಿಂಗ್ ಕೊಂಚ ಹೋರಾಟ ತೋರಿ 14 ಎಸೆತಗಳಲ್ಲಿ 20ರನ್ ಗಳಿಸಿ ಔಟಾದರು. ದಿನೇಶ್ ಕಾರ್ತಿಕ್ ಮತ್ತೊಮ್ಮೆ ವಿಫಲರಾಗಿ 2 ರನ್ ಮಾತ್ರ ಪಡೆದರು. ಸರ್ಫರಾಜ್ ಹಾಗೂ ವೀಸೆ ಕಣಕ್ಕಿಳಿಯುವಷ್ಟರಲ್ಲಿ ಪಂದ್ಯ ಕೈತಪ್ಪುವ ಹಾದಿಯಲ್ಲಿತ್ತು. ಪಂಜಾಬ್ ಪರ ಅಕ್ಷರ್ ಪಟೇಲ್ 11 ಕ್ಕೆ 2 ಮತ್ತು ಅನುರೀತ್ ಸಿಂಗ್ 21 ಕ್ಕೆ 2 ವಿಕೆಟ್ ಪಡೆದು ಆರ್ಸಿಬಿಗೆ ಪೆಟ್ಟು ಕೊಟ್ಟರು.