ಬೆಂಗಳೂರು, ಅ.27: ಬಾಲಿವುಡ್ ನಿರ್ಮಾಪಕಿ, ಗೆಳತಿ ವಂದನಾ ಜೈನ್ ಅವರ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ಕ್ರಿಕೆಟರ್ ಅಮಿತ್ ಮಿಶ್ರಾ ಅವರನ್ನು ಅಶೋಕ್ ನಗರ ಪೊಲೀಸರುವಿ ಚಾರಣೆ ನಡೆಸಿ, ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಸುಮಾರು ಮುರ್ನಾಲ್ಕು ಗಂಟೆಗಳ ಕಾಲ ವಿಚಾರಣೆ ಬಳಿಕ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಜಾಮೀನು ನೀಡಿದರೆ ಮಿಶ್ರಾರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ವಲಯ ಡಿಸಿಪಿ ಸಂದೀಪ್ ಪಾಟೀಲ್ ಅವರು ಹೇಳಿದ್ದರು. ಐಪಿಸಿ ಸೆಕ್ಷನ್ 354 (ಎ) ಸೇರಿದಂತೆ ಮಿಶ್ರಾ ಮೇಲೆ ಹಾಕಿದ್ದ ಸೆಕ್ಷನ್ ಗಳು ಸುಲಭವಾಗಿ ಜಾಮೀನು ಪಡೆಯುವಂತೆ ಇತ್ತು.
ಅಮಿತ್ ಮಿಶ್ರಾ ಅವರು ಗೆಳತಿಯೂ ಆಗಿರುವ ಬಾಲಿವುಡ್ ನಿರ್ಮಾಪಕಿ ವಂದನಾ ಅವರು ತಮ್ಮ ಮೇಲೆ ಬೆಂಗಳೂರಿನ ಹೋಟೆಲ್ ನಲ್ಲಿ ಮಿಶ್ರಾ ಹಲ್ಲೆ ಮಾಡಿದ್ದಾರೆ ಎಂದು ಅಶೋಕ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದರು.[ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಎಫ್ಐಆರ್]
ವಂದನಾ ದೂರು ಹಿಂದಕ್ಕೆ ಪಡೆಯುತ್ತಿದ್ದಾರೆ ಎಂಬ ವದಂತಿ ಗುರುವಾರ ಮಾಧ್ಯಮಗಳಲ್ಲಿ ಹರಿದಾಡಿತ್ತು. ನನಗೆ ಆತನಿಂದ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೋವಾಗಿದೆ ಹೀಗಾಗಿ ನಾನು ದೂರನ್ನು ಹಿಂದಕ್ಕೆ ಪಡೆದಿಲ್ಲ ಎಂದು ನಿರ್ಮಾಪಕಿ ವಂದನಾ ಜೈನ್ ಸ್ಪಷ್ಟಪಡಿಸಿದ್ದರು.
ಹೀಗಾಗಿ ಮಂಗಳವಾರ ವಿಚಾರಣೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಮಿಶ್ರಾ ಅವರನ್ನು ಅಶೋಕ್ ನಗರ ಪೊಲೀಸರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಬೆಳಗ್ಗೆ 10.45ರಿಂದ ಮಧ್ಯಾಹ್ನದ ತನಕ ವಿಚಾರಣೆ ನಡೆಸಿ ನಂತರ ವಶಕ್ಕೆ ಪಡೆದಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. (ಒನ್ ಇಂಡಿಯಾ ಸುದ್ದಿ)