ನವದೆಹಲಿ, ಅಕ್ಟೋಬರ್. 04: ಲೋಧಾ ನೇತೃತ್ವದ ಸಮಿತಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಬ್ಯಾಂಕ್ ಅಕೌಂಟ್ ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರಿಕೆಟ್ ಸರಣಿ ರದ್ದಾಗುವ ಭೀತಿ ಎದುರಾಗಿದೆ.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಇನ್ನೂ ಒಂದು ಟೆಸ್ಟ್ ಹಾಗೂ ಐದು ಏಕದಿನ ಪಂದ್ಯಗಳನ್ನಾಡಬೇಕಿದ್ದು, ಬಿಸಿಸಿಐ ನ ಬ್ಯಾಂಕ್ ಖಾತೆಗಳಲ್ಲಿರುವ ಹಣದ ವಹಿವಾಟಿಗೆ ತಡೆ ಬಿದ್ದಿರುವ ಕಾರಣ ಈ ಪಂದ್ಯಾವಳಿಗಳನ್ನು ನಡೆಸಲು ಹಣದ ಮುಗ್ಗಟ್ಟು ಎದುರಾಗಬಹುದೆಂಬ ಕಾರಣಕ್ಕೆ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿಗಳು, ಅಂತರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿರುವ ವೇಳೆ ಬಿಸಿಸಿಐ ನ ಹಣದ ವಹಿವಾಟಿಗೆ ತಡೆ ಒಡ್ಡಿರುವುದರಿಂದ ಸಮಸ್ಯೆ ಉದ್ಬವವಾಗಿದೆ. ಹಣವೇ ಇಲ್ಲವೆಂದಾದರೆ ಪಂದ್ಯಾವಳಿಗಳನ್ನು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಲೋಧಾ ಸಮಿತಿ ಹೇಳಿದ್ದೇನು: ಸಮಿತಿಯ ಸೂಚನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬಿಸಿಸಿಐ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಬಿಸಿಸಿಐನ ವಹಿವಾಟು ಸ್ಥಗಿತಗೊಳಿಸುವಂತೆ ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದ್ದೇವೆ. ಎಷ್ಟೇ ತುರ್ತು ಸಂದರ್ಭವಿದ್ಧರೂ ಮಂಡಳಿಯ ವಹಿವಾಟು ನಡೆಸಬಾರದು ಎಂದೂ ಸಮಿತಿ ತಾಕೀತು ಮಾಡಿದೆ.
ಸೆಪ್ಟೆಂಬರ್ 30ರಂದು ನಡೆದ ತುರ್ತು ಕಾರ್ಯಕಾರಿ ಸಮಿತಿಯ ಸಭೆ ಯಲ್ಲಿ ಬಿಸಿಸಿಐ ವಿವಿಧ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಅನುದಾನ ನೀಡುವ ತೀರ್ಮಾನ ಕೈಗೊಂಡಿದೆ. ಈ ಎಲ್ಲಾ ವಹಿವಾಟನ್ನು ಸ್ಥಗಿತಗೊಳಿಸಿ ಎಂದು ಲೋಧಾ ಸಮಿತಿ ಬ್ಯಾಂಕುಗಳಿಗೆ ಪತ್ರ ಬರೆದಿದೆ.