ಸಿಡ್ನಿ, ಜ. 22: ಯಾಕೋ ಟೀಂ ಇಂಡಿಯಾ ನಾಯಕ ಧೋನಿ ಟೈಂ ಚೆನ್ನಾಗಿಲ್ಲ ಕಂಡ್ರಿ, ಸೋಲಿನ ಹೊಣೆ ಹೊತ್ತರೂ ಕಾಲ ಮಿಂಚಿ ಹೋಗಿದೆ. ಸರಣಿ ಆಸೀಸ್ ವಶವಾಗಿದೆ. ಈಗ 5-0 ವೈಟ್ ವಾಶ್ ಅವಮಾನ ತಪ್ಪಿಸಿಕೊಳ್ಳಲು ತಯಾರಿ ನಡೆಸಲು ಮೈದಾನಕ್ಕೆ ಇಳಿದರೆ ಮಳೆಯ ಸ್ವಾಗತ ಸಿಕ್ಕಿದೆ.
ಜನವರಿ 23ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯ ಅಂತಿಮ ಪಂದ್ಯ(ಹಗಲು-ರಾತ್ರಿ) ನಡೆಯಲಿದೆ. ಆದರೆ, ಶುಕ್ರವಾರ ಭಾರತ ತಂಡ ಮೈದಾನಕ್ಕಿಳಿಸು ಅಭ್ಯಾ ಮಾಡಲು ಆಗಲಿಲ್ಲ. ಮಳೆಯ ಕಾರಣ ಆಟಗಾರರು ಡ್ರೆಸಿಂಗ್ ರೂಮಿನಲ್ಲೇ ಉಳಿಯಬೇಕಾಯಿತು.
ಇನ್ನೂ ಕೆಟ್ಟ ಸುದ್ದಿ ಏನೆಂದರೆ, ಶನಿವಾರ ಕೂಡಾ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ, 4-0 ಮುನ್ನಡೆ ಪಡೆದಿರುವ ಆಸ್ಟ್ರೇಲಿಯಾ ವಿರುದ್ಧ ಒಂದು ಪಂದ್ಯವನ್ನಾದರೂ ಗೆಲ್ಲುವ ಧೋನಿ ಕನಸು ನನಸಾಗದೆ ಉಳಿಯುವ ಸಾಧ್ಯತೆಯಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಪ್ರಕಾರ ಶನಿವಾರ ಗುಡುಗು, ಗಾಳಿ ಸಹಿತ ಭಾರಿ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.
ಹವಾಮಾನ ಇಲಾಖೆ ತಜ್ಞ ರಾಬ್ ಟಾಗರ್ಟ್ ಅವರು ಕೂಡಾ ವರದಿಯನ್ನು ಅನುಮೋದಿಸಿ, ಭಾರಿ ಮಳೆ ನಿರೀಕ್ಷಿಸಬಹುದು ಎಂದಿದ್ದಾರೆ. ಹೀಗಾಗಿ ಒಂದು ವೇಳೆ ನಾಳೆ ಮಳೆ ಶುರುವಾದರೆ, ಪಂದ್ಯ ನಡೆಯುವುದು ಅನುಮಾನ. ಭಾರತಕ್ಕೆ ಗೆಲುವು ಕನಸಾಗಲಿದೆ.
ಕಳೆದ ವರ್ಷ ಇದೇ ವೇಳೆಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ತ್ರಿಕೋನ ಸರಣಿಯ ಪಂದ್ಯ ಸಿಡ್ನಿಯಲ್ಲಿ ಜನವರಿ 26,2015ರಂದು ಮಳೆಯ ಕಾರಣ ರದ್ದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರವಾಸಿ ಭಾರತ ತಂಡದ ವಿರುದ್ಧ ಐದು ಪಂದ್ಯಗಳ ಏಕದಿನ ಸರಣಿಯನ್ನು ಗೆದ್ದಿರುವ ಆಸ್ಟ್ರೇಲಿಯಾ ಪಡೆ ಏಕದಿನ ಸರಣಿ ನಂತರ ಜನವರಿ 26(ಮಂಗಳವಾರ) ರಿಂದ 3 ಟ್ವೆಂಟಿ 20 ಪಂದ್ಯವನ್ನು ಆಡಲಿದೆ. (ಒನ್ ಇಂಡಿಯಾ ಸುದ್ದಿ)