ಮೀರ್ ಪುರ್, ಜೂ.22: ಅತಿಥೇಯ ಬಾಂಗ್ಲಾದೇಶದ ವಿರುದ್ಧ ಸತತ ಎರಡು ಏಕದಿನ ಪಂದ್ಯಗಳನ್ನು ಸೋತು, ಸರಣಿಯನ್ನು ಉಡುಗೊರೆಯಾಗಿ ನೀಡಿರುವ ಟೀಂ ಇಂಡಿಯಾ ವಿರುದ್ಧ ಅಭಿಮಾನಿಗಳು ಕಿಡಿಕಾರಿದ್ದಾರೆ. ಸೋಲಿಗೆ ನಾನೇ ಕಾರಣ ಎಂದೆನಿಸಿದರೆ ಪದತ್ಯಾಗ ಮಾಡಲು ಸಿದ್ಧ ಎಂದು ಧೋನಿ ಹೇಳಿದ್ದಾರೆ.
ಎರಡನೇ ಏಕದಿನ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಧೋನಿ ಈ ರೀತಿ ಹೇಳಿಕೆ ನೀಡಿ ಕಿಡಿ ಹಚ್ಚಿದ್ದಾರೆ. ಟೀಂ ಇಂಡಿಯಾದ ಎಲ್ಲಾ ಸೋಲು, ಕಷ್ಟಗಳಿಗೆ ನಾನೇ ಕಾರಣನಾಗುತ್ತಿದ್ದೇನೆ. ನನ್ನಿಂದಲೇ ಎಲ್ಲಾ ತೊಂದರೆಗಳು ಆಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. [ಏಕದಿನ ಕ್ರಿಕೆಟ್ ಸರಣಿಗೆ ಗೈಡ್]
ಬಾಂಗ್ಲಾದೇಶ ಮಾಧ್ಯಮಗಳು ಕೂಡಾ ನಗೆ ಚಟಾಕಿ ಹಾರಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ತಂಡದ ಹಿತದೃಷ್ಟಿಯಿಂದ ನನಗೆ ನೀಡಿರುವ ನಾಯಕತ್ವವನ್ನು ಹಿಂಪಡೆದರೆ ನಾನು ಸಂತೋಷದಿಂದ ಬಿಟ್ಟುಕೊಡುತ್ತೇನೆ ಎಂದು ಧೋನಿ ಹೇಳಿದ್ದಾರೆ.
ಭಾರತದ ಸೋಲಿನ ಬಗ್ಗೆ ಧೋನಿ ಮಾತನಾಡುವಾಗ ತೂರಿ ಬಂದ ನಾಯಕತ್ವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಧೋನಿ, ನಾನು ನನ್ನ ಕ್ರಿಕೆಟ್ ಹಾಗೂ ನಾಯಕತ್ವ ಎರಡಲ್ಲೂ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಹಾಗೂ ಆನಂದಿಸುತ್ತಿದ್ದೇನೆ. ನಾನು ಈ ಪ್ರಶ್ನೆಯನ್ನು ನಿರೀಕ್ಷಿಸುತ್ತಿದ್ದೆ. ಮಾಧ್ಯಮದವರಿಗೆ ನನ್ನ ನಾಯಕತ್ವದ ಬಗ್ಗೆ ಪ್ರಶ್ನಿಸುವುದೆಂದರೆ ತುಂಬಾ ಇಷ್ಟ ಎಂದರು. [ಎಡಗೈ ವೇಗಿಗೆ ಎಡಗೈಲಿ ಗುದ್ದಿದ ಧೋನಿಗೆ ದಂಡ]
ನನ್ನನ್ನು ನಾಯಕತ್ವದಿಂದ ಕಿತ್ತು ಹಾಕಿದರೆ ತಂಡಕ್ಕೆ ಒಳ್ಳೆಯದಾಗುತ್ತೆ. ಯುವ ಕ್ರಿಕೆಟರ್ ಗೆ ನಾಯಕತ್ವ ನೀಡಿದರೆ ತಂಡ ಚೆನ್ನಾಗಿ ಆಡುತ್ತಎ ಎಂದೆನಿಸಿದರೆ ನಾನು ನಾಯಕತ್ವ ಪಟ್ಟದಿಂದ ಕೆಳಗಿಳಿದು ಸಾಮಾನ್ಯ ಆಟಗಾರನಂತೆ ಆಡಲು ಸಿದ್ಧ ಎಂದಿದ್ದಾರೆ. ['ಹಳದಿ ಕಪ್ಪು ಮಿಂಚಿನ ಹೊಡೆತಕ್ಕೆ ಭಾರತ ಬಲಿ']
ನಾಯಕ ಯಾರಾದರೂ ನಾನು ಆಡುವುದು ತಂಡಕ್ಕೆ, ಭಾರತಕ್ಕೆ ಎಂಬುದನ್ನು ಮರೆಯುವುದಿಲ್ಲ. ನಾನು ಎಂದೂ ಕ್ಯಾಪ್ಟನ್ಸಿ ಬಯಸಿರಲಿಲ್ಲ. ಅದರೆ, ನಾನು ಜವಾಬ್ದಾರಿಯಿಂದ ಎಂದೂ ವಿಮುಖನಾಗಿಲ್ಲ. ಇದು ಅವರು ಕೊಟ್ಟಿದ್ದು, ಈಗ ಅವರೇ ಹಿಂಪಡೆದರೆ ಸಂತೋಷ ಎಂದಿದ್ದಾರೆ. (ಪಿಟಿಐ)