ಮೆಲ್ಬರ್ನ್, ಮಾರ್ಚ್ 16: ಭಾರತ ಮೂಲದ ಉದ್ಯಮಿ ಗೌತಮ್ ಅದಾನಿ, ಕ್ವೀನ್ಸ್ ಲ್ಯಾಂಡ್ ನಲ್ಲಿ ನಡೆಸಲು ಉದ್ದೇಶಿಸಿರುವ ಕಲ್ಲಿದ್ದಲು ಗಾಣಿಗಾರಿಕೆಯನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ, ಮುಂಬರುವ ದಿನಗಳಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಅದು ಗಾಢವಾದ ಪರಿಣಾಮ ಬೀರಲಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರುಗಳು ಎಚ್ಚರಿಕೆ ನೀಡಿದ್ದಾರೆ.
ಮಾಜಿ ಕ್ರಿಕೆಟಿಗರು ಹಾಗೂ ಸಹೋದದರಾದ ಇಯಾನ್ ಹಾಗೂ ಗ್ರೇಗ್ ಚಾಪೆಲ್ ಸೇರಿದಂತೆ ಹಲವಾರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಗರ್ ಗಳು ಈ ಗಣಿಗಾರಿಕೆ ವಿರುದ್ಧ ದನಿಯೆತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಕಲ್ಲಿದ್ದಲು ಗಣಿಗಾರಿಕೆ ಬಿಟ್ಟು ಆಸ್ಟ್ರೇಲಿಯಾದಲ್ಲಿ ಬಹು ಬೇಡಿಕೆಯುಳ್ಳ ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಪಟ್ಟ ಯಾವುದಾದರೂ ಉದ್ಯಮ ಮಾಡಿದರೆ ತಾವು ಬೆಂಬಲಿಸುವುದಾಗಿ ಕ್ರಿಕೆಟಿಗರು ತಿಳಿ ಹೇಳಿದ್ದಾರೆ.
ಈ ಬಗ್ಗೆ ತೀಕ್ಷ್ಣ ನುಡಿಗಳಿಂದ ಚುಚ್ಚಿರುವ ಚಾಪೆಲ್, ''ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾಂಧವ್ಯಗಳಲ್ಲಿ ಕ್ರಿಕೆಟ್ ಅನುಬಂಧವೂ ಪ್ರಮುಖವಾದದ್ದು. ನೀವು (ಗೌತಮ್ ಅದಾನಿ) ಕ್ವೀನ್ಸ್ ಲ್ಯಾಂಡ್ ನಲ್ಲಿ ಗಣಿಗಾರಿಕೆ ನಡೆಸಲು ಉದ್ದೇಶಿಸಿದ್ದೇ ಆದರೆ ಇದು ಮುಂಬರುವ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ'' ಎಂದೂ ಎಚ್ಚರಿಸಿದ್ದಾರೆ.
ಕ್ವೀನ್ಸ್ ಲ್ಯಾಂಡ್ ನಲ್ಲಿ 217.7 ಬಿಲಿಯನ್ ಡಾಲರ್ ಮೊತ್ತದ ಕಲ್ಲಿದ್ದಲು ಗಣಿಗಾರಿಕೆಯನ್ನು ಆರಂಭಿಸಲು ಅದಾನಿ ನಿರ್ಧರಿಸಿದ್ದು, ಗಣಿಗಾರಿಕೆ ಆರಂಭಿಸಲು ಈಗಾಗಲೇ ಆಸ್ಟ್ರೇಲಿಯಾ ಹಾಗೂ ಕ್ವೀನ್ಸ್ ಲ್ಯಾಂಡ್ ಸರ್ಕಾರಗಳಿಂದ ಹಸಿರು ನಿಶಾನೆಯನ್ನೂ ಪಡೆದಿದ್ದಾರೆ. ಇದು ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಗಣಿಗಾರಿಕೆಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.
ಸುಮಾರು 1.1 ಮಿಲಿಯನ್ ಕ್ಯೂಬಿಕ್ ಮೀಟರ್ ಗಳವರೆಗೆ ಗಣಿಗಾರಿಕೆ ನಡೆಸಲಿರುವ ಅದಾನಿ ಕಂಪನಿ, ಅಲ್ಲಿ ತಗೆದ ಮಣ್ಣನ್ನು ದೂರದಲ್ಲಿ ಹರಡುವ ಮೂಲಕ ಎರಡು ಕಡೆ ಪರಿಸರಕ್ಕೆ ಮಾರಕತೆ ಉಂಟು ಮಾಡುತ್ತದೆ ಎಂಬುದು ಅಲ್ಲಿನ ನಿವಾಸಿಗಳ ತಕರಾರು ಆಗಿದೆ.