ಕ್ಯಾನ್ ಬೆರಾ, ಜ. 20: ಅತಿಥೇಯ ಆಸ್ಟೇಲಿಯಾ ವಿರುದ್ಧ ಸತತ ಮೂರು ಸೋಲು ಕಂಡು ಸರಣಿ ಕೈಗಿತ್ತ ಮೇಲೆ ಸೋಲಿಗೆ ನಾನೇ ಕಾರಣ ಎಂದು ಒಪ್ಪಿಕೊಳ್ಳುವವರು ಕಂಡು ಬಂದಿದ್ದಾರೆ. ನಾಲ್ಕನೇ ಪಂದ್ಯದ ಸೋಲಿಗೆ ಯಾರು ಕಾರಣ ಎಂಬ ಪ್ರಶ್ನೆಗೆ ನಾನೇ ಎಂದು ನಾಯಕ ಧೋನಿ ಪಂದ್ಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ನಾಲ್ಕನೇ ಪಂದ್ಯದಲ್ಲಿ ಗೆಲ್ಲಲು 349ರನ್ ಗುರಿ ಇದ್ದರೂ ಭಾರತದ ಪರ ಶಿಖರ್ ಧವನ್ (126 ರನ್) ಹಾಗೂ ವಿರಾಟ್ ಕೊಹ್ಲಿ (106) ಶತಕ ಬಾರಿಸಿ ಗೆಲುವಿನ ಕನಸು ಹುಟ್ಟಿಸಿದರು. ಆದರೆ, ಇಬ್ಬರಲ್ಲಿ ಒಬ್ಬರಾದರೂ ಕೊನೆ ತನಕ ಉಳಿದಿದ್ದರೆ ಪಂದ್ಯದ ದಿಕ್ಕು ಬದಲಾಯಿಸಬಹುದಾಗಿತ್ತು. [ | ಪಂದ್ಯದ ವರದಿ]
ಇಬ್ಬರು ವಿಕೆಟ್ ಒಪ್ಪಿಸುತ್ತಿದ್ದಂತೆ ಸತತವಾಗಿ ವಿಕೆಟ್ ಗಳು ಉದುರಲಾರಂಭಿಸಿತು. ಆಲ್ ರೌಂಡರ್ ಎನಿಸಿಕೊಂಡಿರುವ ರವೀಂದ್ರ ಜಡೇಜ ಕೂಡಾ ಪಂದ್ಯ ಗೆಲ್ಲಿಸಲಾಗಲಿಲ್ಲ. ಉಮೇಶ್ ಯಾದವ್ ಸಾಥ್ ನೀಡಲಿಲ್ಲ ಎಂಬ ಚರ್ಚೆಯ ನಡುವೆ ಮೂರು ಎಸೆತ ಮಾತ್ರ ಎದುರಿಸಿ ಶೂನ್ಯ ಸುತ್ತಿದ ನಾಯಕ ಧೋನಿ ಅವರು ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ.[ಕೊಹ್ಲಿ 25ನೇ ಶತಕ, ಮತ್ತೆ ದಾಖಲೆಗಳು ಧ್ವಂಸ]
349ರನ್ ಚೇಸ್ ಮಾಡುತ್ತಿದ್ದ ಟೀಂ ಇಂಡಿಯಾ 37 ಓವರ್ ನಲ್ಲಿ 277/1 ಸ್ಕೋರ್ ಮಾಡಿ ಸುಸ್ಥಿತಿಯಲ್ಲಿತ್ತು ಆದರೆ, ಅಂತಿಮವಾಗಿ 49.2 ಓವರ್ ಗಳಲ್ಲಿ 323 ಸ್ಕೋರಿಗೆ ಆಲೌಟ್ ಆಯಿತು. ಭಾರತ ವಿರುದ್ಧ ಸತತ ನಾಲ್ಕು ಪಂದ್ಯ ಗೆದ್ದ ಬಳಿಕ ಆಸ್ಟ್ರೇಲಿಯಾ ತನ್ನ ನೆಲದಲ್ಲಿ ಸತತ 19 ಗೆಲುವು ದಾಖಲೆ ಬರೆದಿದೆ.
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಾನು ಏನೂ ಸ್ಕೋರ್ ಮಾಡಲಾಗಿಲ್ಲ ಎಂಬುದರ ಬಗ್ಗೆ ಬೇಸರವಿದೆ ಆದರೆ, ಕೋಪವಿಲ್ಲ. ಈ ಪಂದ್ಯದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಅನುಭವಿಗಳು ಕೊನೆ ತನಕ ವಿಕೆಟ್ ಕಾಯ್ದುಕೊಳ್ಳಬೇಕಾಗಿತ್ತು. ನಮಗೆ ಗೆಲ್ಲುವ ಎಲ್ಲಾ ಅವಕಾಶಗಳಿತ್ತು ಎಂದು ಧೋನಿ ಹೇಳಿದ್ದಾರೆ. ಏಕದಿನ ಸರಣಿಯ ಕೊನೆ ಪಂದ್ಯ ಶನಿವಾರ (ಜನವರಿ 23) ರಂದು ಸಿಡ್ನಿಯಲ್ಲಿ ನಡೆಯಲಿದೆ.(ಒನ್ಇಂಡಿಯಾ ಸುದ್ದಿ)