ಬೆಂಗಳೂರು, ಅ.20: ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದ ಸಮಯದಲ್ಲಿ ತಂಡ ಸೇರುವ ತವಕದಲ್ಲಿ ಹೆಚ್ಚಿನ ಅಭ್ಯಾಸ ನಡೆಸುವ ಕ್ರಿಕೆಟರ್ಸ್ ಬಗ್ಗೆ ಕೇಳಿರಬಹುದು. ಅದರೆ, ತಂಡದ ರಾಕ್ ಸ್ಟಾರ್ ಜಡೇಜ ಅವರು ಕ್ರಿಕೆಟ್ ಬಿಟ್ಟು ಕೆಲ ತಿಂಗಳು ಕುದುರೆ ಜೊತೆ ಕಾಲದೂಡಿದ ಸುದ್ದಿ ಬಂದಿದೆ.
ಕಳೆದ ಜೂನ್ ತಿಂಗಳಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ 'ರಾಕ್ ಸ್ಟಾರ್' ರವೀಂದ್ರ ಜಡೇಜ ಅವರಿಗೆ ಅಕ್ಟೋಬರ್ 19ರಂದು ಬಿಸಿಸಿಐ ಕಡೆಯಿಂದ ಸಿಹಿ ಸುದ್ದಿ ಬಂದಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ರವೀಂದ್ರ ಜಡೇಜ ಅವರು ಆಯ್ಕೆಯಾಗಿದ್ದಾರೆ.
ಸುಮಾರು ನಾಲ್ಕು ತಿಂಗಳುಗಳ ಕಾಲ ತಂಡದಿಂದ ಹೊರಗುಳಿದಿದ್ದ ಜಡೇಜ ಅವರು ಮತ್ತೊಮ್ಮೆ ತಂಡ ಸೇರಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. 26ವರ್ಷ ವಯಸ್ಸಿನ ಎಡಗೈ ಆಲ್ ರೌಂಡರ್ ಜಡೇಜ ಅವರು ಟೀಂ ಇಂಡಿಯಾದಿಂದ ಹೊರಗಡೆ ಇದ್ದಾಗ ಏನು ಮಾಡುತ್ತಿದ್ದೆ ಎಂಬುದನ್ನು ವಿವರಿಸಿದ್ದಾರೆ.
ಸೌರಾಷ್ಟ್ರ ಪರ ಆಡುತ್ತಿರುವ ರವೀಂದ್ರ ಜಡೇಜ ಅವರು ಪ್ರಸಕ್ತ ಸರಣಿಯ ಅತಿ ಹೆಚ್ಚು ವಿಕೆಟ್ (24) ಪಡೆದ ಆಟಗಾರ ಎನಿಸಿದ್ದಾರೆ. 2 ಅರ್ಧಶತಕ ಸಿಡಿಸಿದ್ದಾರೆ. ಉತ್ತಮ ಲಯದಲ್ಲಿರುವ ಜಡೇಜ ಅವರಿಗೆ ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಮಣೆ ಹಾಕಿದೆ.
ಕುದುರೆ ಜೊತೆ ಜಡೇಜ: ಬಾಂಗ್ಲಾದೇಶ ವಿರುದ್ಧ ಜೂನ್ 21ರಂದು ಏಕದಿನ ಕ್ರಿಕೆಟ್ ಆಡಿದ್ದ ಜಡೇಜ ಅವರು ರಣಜಿ ಆರಂಭಕ್ಕೂ ಮುನ್ನ ತಮ್ಮ ತೋಟಕ್ಕೆ ತೆರಳಿ, ತಮ್ಮ ನೆಚ್ಚಿನ ಕುದುರೆ ಜೊತೆ ಕಾಲ ಕಳೆದಿದ್ದಾರೆ.
ಕುದುರೆ ಜೊತೆ ಕಾಲ ಕಳೆದ ಜಡೇಜ ಅವರು ಕ್ರಿಕೆಟ್ ಮೈದಾನದ ಕಡೆ ತಲೆ ಹಾಕಿರಲಿಲ್ಲವಂತೆ. ರಣಜಿ ಋತುವಿಗೂ ಮುನ್ನ ಮನಸ್ಸು ಹಗುರ ಮಾಡಿಕೊಳ್ಳಲು ಕುದುರೆ ಜೊತೆ ಕಳೆದ ಕಾಲ ಸಹಕಾರಿಯಾಗಿದೆ ಎಂದು ಜಡೇಜ ಅವರು ಬಿಸಿಸಿಐ.ಟಿವಿಗೆ ತಿಳಿಸಿದ್ದಾರೆ.
ಸಾಕು ಪ್ರಾಣಿಗಳು, ಸ್ನೇಹಿತರ ಜೊತೆ ಕಾಲ ಕಳೆದ ಮೇಲೆ ನನ್ನ ಮನಸ್ಸು ಹಗುರಾಯಿತು. ರಣಜಿ ಋತುವಿನ ಮೊದಲ ಪಂದ್ಯದಿಂದಲೇ ಉತ್ತಮ ಪ್ರದರ್ಶನ ನೀಡಲು ನೆರವಾಯಿತು. ಕೆಲವೊಮ್ಮೆ ಲಯ ಕಳೆದುಕೊಂಡಾಗ ಐದಾರು ತಿಂಗಳಾದರೂ ದೇಶಿ ಕ್ರಿಕೆಟ್ ಪಂದ್ಯಗಳಲ್ಲಿ ಆಡಿ ಪೂರ್ವ ತಯಾರಿ ನಡೆಸಿದರೆ ಮಾತ್ರ ರಾಷ್ಟ್ರೀಯ ತಂಡಕ್ಕೆ ಮರಳಲು ಸಾಧ್ಯ ಎಂಬುದು ಸಾಬೀತಾಗಿರುವ ಸತ್ಯ. ಈಗ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿ ಮೊಹಲಿಯಲ್ಲಿ ನವೆಂಬರ್ 5ರಿಂದ ಆರಂಭಗೊಳ್ಳಲಿದೆ. ಸರಣಿಯ ಮೊದಲೆರಡು ಪಂದ್ಯಗಳಿಗೆ ರವೀಂದ್ರ ಜಡೇಜ ಅವರು ಆಯ್ಕೆಯಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)