ಕೋಲ್ಕತಾ, ಜನವರಿ 03: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸ್ಥಾನದ ರೇಸಿನಲ್ಲಿ ನಾನಿಲ್ಲ ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ (ಸಿಎಬಿ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೌರವ್, 'ನನ್ನ ಹೆಸರು ಅನಗತ್ಯವಾಗಿ ತೆಗೆದುಕೊಳ್ಳಲಾಗುತ್ತದೆ. ನನಗೆ ಈ ಹುದ್ದೆಗೆ ಅರ್ಹತೆ ಇಲ್ಲ, ನಾನು ಸಿಎಬಿ ಅಧ್ಯಕ್ಷನಾಗಿ ಒಂದು ವರ್ಷ ಮಾತ್ರ ಪೂರೈಸಿದ್ದೇನೆ. ಇನ್ನೂ ಎರಡು ವರ್ಷ ಬಾಕಿ ಇದೆ. ನಾನು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಯಾಗಲು ಸಾಧ್ಯವಿಲ್ಲ' ಎಂದಿದ್ದಾರೆ.[ಬಿಸಿಸಿಐ ಅಧ್ಯಕ್ಷಗಿರಿ: ಗಂಗೂಲಿಗೆ ಗವಾಸ್ಕರ್ ಬೆಂಬಲ]
ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಯಲ್ಲಿ ನ್ಯಾ. ಲೋಧಾ ಸಮಿತಿ ವರದಿ ಶಿಫಾರಸ್ಸುಗಳನ್ನು ಅಳವಡಿಸುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಗಂಗೂಲಿ, ಸುಪ್ರೀಂಕೋರ್ಟ್ ಆದೇಶ ಪಾಲಿಸಲೇ ಬೇಕು, ಬುಧವಾರ ಸಿಎಬಿ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಈ ಬಗ್ಗೆ ಚರ್ಚಿಸಲಾಗುವುದು ಎಂದರು.
ಜನವರಿ 22 ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ ಈಡನ ಗಾರ್ಡನ್ ನಲ್ಲಿ ಮೂರನೇ ಏಕದಿನ ಪಂದ್ಯ ನಿಗದಿಯಾಗಿದೆ. ಈ ಪಂದ್ಯದ ನಂತರವಷ್ಟೇ ವಿಶೇಷ ಸಭೆ ಕರೆದು ಅಂತಿಮ ತೀರ್ಮಾನವನ್ನು ಸಿಎಬಿ ತೆಗೆದುಕೊಳ್ಳಲಿದೆ ಎಂದು ಸೌರವ್ ಹೇಳಿದರು (ಪಿಟಿಐ)