ಹೈದರಾಬಾದ್, ಏಪ್ರಿಲ್ 21: ಸಾಫ್ಟ್ ವೇರ್ ತಂತ್ರಜ್ಞರು ಏಕಿಷ್ಟು ದುರ್ಬಲ ಮನಸ್ಸಿನವರೋ ಗೊತ್ತಿಲ್ಲ. ತಾನು ಅಭಿವೃದ್ಧಿಪಡಿಸಿದ ಸಾಮಾಜಿಕ ಜಾಲತಾಣ ಅಪ್ಲಿಕೇಷನ್ ವೈಫಲ್ಯಗೊಂಡಿದ್ದರಿಂದ ನೊಂದ ಇಂಜಿನಿಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
33 ವರ್ಷ ವಯಸ್ಸಿನ ಟೆಕ್ಕಿ ಲಕ್ಕಿ ಗುಪ್ತಾ ಅಗರವಾಲ್ ಅವರು ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಳಕೆ ಮಾಡಬಲ್ಲಂಥ ಸಾಫ್ಟ್ ವೇರ್ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸುತ್ತಿದ್ದರು. ಆದರೆ, ಸತತ ಪ್ರಯತ್ನದ ನಂತರವೂ ಈ ಅಪ್ಲಿಕೇಷನ್ ಸರಿಯಾದ ಫಲಿತಾಂಶ ನೀಡುವಲ್ಲಿ ವಿಫಲವಾಗಿತ್ತು. ಇದರಿಂದ ತೀವ್ರವಾಗಿ ಮನನೊಂದ ಗುಪ್ತಾ ಅವರು ನೈಟ್ರೋಜನ್ ಅನಿಲ ಸೇವಿಸಿ ಕೊನೆಯುಸಿರೆಳೆದಿದ್ದಾರೆ.
ಅಮೀರ್ ಪೇಟ್ ನ ಡಿಕೆ ರಸ್ತೆಯಲ್ಲಿರುವ ಸ್ವರ್ಣ ಪ್ಲಾಜಾ ಅಪಾರ್ಟ್ಮೆಂಟ್ ನಿವಾಸಿಯಾಗಿದ್ದ ಗುಪ್ತಾ ಅವರ ತಂದೆ ಉದ್ಯಮಿ ಆಶೀಕ್ ಕುಮಾರ್ ಅಗರವಾಲ್ ಅವರಿಗೆ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಮೊದಲಿಗೆ ತಿಳಿದು ಬಂದಿದೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ನೈಟ್ರೋಜನ್ ಗ್ಯಾಸ್ ಸಿಲಿಂಡರ್ ನಿಂದ ಅನಿಲ ಸೇವಿಸಿ ಆತ್ಮಹತ್ಯೆಮಾಡಿಕೊಂಡಿರುವುದನ್ನು ನೋಡಿದ್ದಾರೆ.
ಗುಪ್ತಾ ಇರುವ ಕೊಠಡಿಯಲ್ಲಿ ಆತ್ಮಹತ್ಯಾ ಪತ್ರ ಸಿಕ್ಕಿದೆ. ಅದರಲ್ಲಿ 'ನೋವಿಲ್ಲದ ಸಾವು ಕಂಡ ನಾನೇ ಅದೃಷ್ಟವಂತ' ಎಂದು ಬರೆಯಲಾಗಿದೆ. ಮೂರು ಅಡಿ ಎತ್ತರದ ನೈಟ್ರೋಜನ್ ಸಿಲಿಂಡರ್, ಪೈಪು, ಮಾಸ್ಕ್ ವಶಪಡಿಸಿಕೊಂಡಿರುವ ಪೊಲೀಸರು ಮಾರ್ಚ್ 17ರಂದು ಈ ನೈಟ್ರೋಜನ್ ಸಿಲಿಂಡರ್ ಖರೀದಿಸಿದ್ದ ಎಂದಿದ್ದಾರೆ.
ಕೆಲ ದಿನಗಳಿಂದ 'ನೋವಿಲ್ಲದೆ ಹೇಗೆ ಸಾಯಬಹುದು' ಎಂಬುದರ ಬಗ್ಗೆ ಲಕ್ಕಿ ಆನ್ ಲೈನ್ ನಲ್ಲಿ ಹುಡುಕಾಡಿ ಮಾಹಿತಿ ಕಲೆ ಹಾಕಿದ್ದರು. ಸಿಆರ್ ಪಿಸಿ ಸೆಕ್ಷನ್ 174 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.