ನವದೆಹಲಿ, ಜುಲೈ 28: ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಸದ್ಯಕ್ಕೆ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕೈಗೊಂಡ ನಿರ್ಣಯಕ್ಕೆ ಮಾಜಿ ನಾಯಕ ಸೌರವ್ ಗಂಗೂಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಉಭಯ ದೇಶಗಳ ನಡುವೆ ಗಡಿಯಾಚೆಗಿನ ಭಯೋತ್ಪಾದನೆ, ಗುಂಡಿನ ಚಕಮಕಿ ನಿಲ್ಲದ ಹೊರತೂ ಸರಣಿ ಆರಂಭದ ಬಗ್ಗೆ ಮಾತುಕತೆಯಾಡದಿರುವುದೇ ಉತ್ತಮ ಎಂದು ಗಂಗೂಲಿ ಪ್ರತಿಕ್ರಿಯಿಸಿದ್ದಾರೆ. 2023 ತನಕ ಎಂಟು ವರ್ಷಗಳಲ್ಲಿ ಸುಮಾರು 5 ದ್ವಿಪಕ್ಷೀಯ ಸರಣಿ ನಡೆಸಲು ಎರಡು ದೇಶಗಳ ಕ್ರಿಕೆಟ್ ನಿಯಂತ್ರಣ ಮಂಡಳಿಗಳು ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದಂತೆ ಟೂರ್ನಿ ನಡೆಸುವಂತೆ ಬಿಸಿಸಿಐಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೋರಿಕೊಂಡಿತ್ತು.[ಭಾರತ-ದಕ್ಷಿಣ ಆಫ್ರಿಕಾ ಸರಣಿ ದಿನಾಂಕಪಟ್ಟಿ ಪ್ರಕಟ]
ಆದರೆ, ಪಂಜಾಬಿನ ಗುರುದಾಸಪುರದ ಪೊಲೀಸ್ ಠಾಣೆಯೊಂದರ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಯ ಬಳಿಕ ಈ ವರ್ಷದ ಅಂತ್ಯದ ವೇಳೆಗೆ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಸರಣಿಯನ್ನು ಮುಂದೂಡಲು ಬಿಸಿಸಿಐ ನಿರ್ಧರಿಸಿ, ಈ ಬಗ್ಗೆ ಪ್ರಕಟಣೆ ಹೊರಡಿಸಿತ್ತು.[[ಸೆಪ್ಟೆಂಬರ್ 2015ರಿಂದ ಮಾರ್ಚ್ 2016 ರ ತನಕ ಕ್ರಿಕೆಟ್ ವೇಳಾಪಟ್ಟಿ]]
ಡಿಸೆಂಬರ್ ತಿಂಗಳಿನಲ್ಲಿ ಭಾರತ ಕ್ರಿಕೆಟ್ ತಂಡ ಯುಎಇಯಲ್ಲಿ ಪಾಕ್ ವಿರುದ್ಧ ಎರಡು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಆಡುವ ಬಗ್ಗೆ ಈ ಹಿಂದೆ ನಿರ್ಧಾರವಾಗಿತ್ತು.[2016ರಲ್ಲಿ ಆಸ್ಟ್ರೇಲಿಯಾಕ್ಕೆ ಟೀಂ ಇಂಡಿಯಾ, ವೇಳಾಪಟ್ಟಿ]
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, 'ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಹಾಗೂ ಭಾರತ ತಂಡಗಳ ನಡುವೆ ಕ್ರಿಕೆಟ್ ಸರಣಿ ನಡೆಯುವ ಸಾಧ್ಯತೆ ಕ್ಷೀಣಿಸಿದೆ. ಪಾಕ್ ತಂಡದೊಂದಿಗೆ ಕ್ರಿಕೆಟ್ ಆಡುವ ಮೊದಲು ಎರಡೂ ದೇಶಗಳ ನಡುವಿನ ನಾನಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ" ಎಂದು ಹೇಳಿದ್ದರು.[ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ 'ದಾದಾ'ಗೆ 43]
2004ರಲ್ಲಿ ನಾವು ಪಾಕಿಸ್ತಾನಕ್ಕೆ ತೆರಳಿದ್ದ ತಂಡದ ನಾಯಕತ್ವ ವಹಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಟೆಸ್ಟ್ ಹಾಗೂ ಏಕದಿನ ಸರಣಿ ಗೆಲುವಿನೊಂದಿಗೆ ಪಾಕಿಸ್ತಾನದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದು ಇನ್ನೂ ನೆನಪಿದೆ. 15 ವರ್ಷಗಳ ಬಳಿಕ ಈ ಬಗ್ಗೆ ಚಿಂತನೆ ನಡೆದಿರುವುದು ಒಳ್ಳೆ ಬೆಳವಣಿಗೆ. ಅದರೆ, ದೇಶದ ಪರಿಸ್ಥಿತಿ ನೋಡಿಕೊಂಡು ಟೂರ್ನಿ ಆಯೋಜಿಸಬೇಕಿದೆ ಎಂದು 43 ವರ್ಷ ವಯಸ್ಸಿನ ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.
ಭಾರತದಲ್ಲಿ ಎಂದಿಗೂ 2 ಕ್ಯಾಪ್ಟನ್ ಮಾದರಿ ಕ್ಲಿಕ್ ಆಗಿಲ್ಲ, ಅಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾದಲ್ಲಿ ಈ ರೀತಿ ವ್ಯವಸ್ಥೆ ಇದ್ದರೂ ಗೆಲ್ಲುವ ತನಕ ಎಲ್ಲವೂ ಚೆನ್ನಾಗಿರುತ್ತದೆ. ಧೋನಿ ಅವರು ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಮೇಲೆ ಈ ಥಿಯರಿಗೆ ಬೆಲೆ ಬಂದಿದೆ. ಕಾದುನೋಡೋಣ ಎಂದು ಗಂಗೂಲಿ ನಗೆ ಚೆಲ್ಲಿದರು. (ಪಿಟಿಐ)