ನವದೆಹಲಿ, ಅಕ್ಟೋಬರ್ 21: ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆರ್ಥಿಕ ವ್ಯವಹಾರಕ್ಕೆ ಸುಪ್ರೀಂಕೋರ್ಟ್ ಬ್ರೇಕ್ ಹಾಕಿದೆ. ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಡಿಸೆಂಬರ್ 5 ಕ್ಕೆ ಮುಂದೂಡಿದೆ.
ನ್ಯಾ ಲೋಧಾ ಸಮಿತಿ ನೀಡಿರುವ ಶಿಫಾರಸು ಜಾರಿಗೊಳಿಸುವವರೆಗೆ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದಂತೆ ಬಿಸಿಸಿಐಗೆ ನಿರ್ಬಂಧ ಹೇರಿ ಆದೇಶಿಸಿದೆ.
ಇದರ ಜೊತೆಗೆ ಸ್ವತಂತ್ರ ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿ,ಸಿ ಬಿಸಿಸಿಐ ವ್ಯವಹಾರ ಮತ್ತು ಖಾತೆಗಳನ್ನು ಆಡಿಟ್ ಮಾಡುವಂತೆ ಸೂಚಿಸಿದೆ. ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ಗೆ ಲೋಧಾ ಸಮಿತಿಯ ಮುಂದೆ ಹಾಜರಾಗಿ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವ ಸಂಬಂಧ ಸೂಚನೆ ಪಡೆದುಕೊ್ಳುವಂತೆ ತಿಳಿಸಲಾಗಿದೆ.
ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಬಿಸಿಸಿಐ ಸಿದ್ಧವಿದೆ. ಆದರೆ, ರಾಜ್ಯ ಸಂಸ್ಥೆಗಳು ಶಿಫಾರಸುಗಳಿಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಸುಪ್ರೀಂ ಆದೇಶವನ್ನು ಬಿಸಿಸಿಐ ಪ್ರಶ್ನಿಸಿತ್ತು. ಈಗ ರಾಜ್ಯ ಸಂಸ್ಥೆಗಳಿಗೆ ಈಗಾಗಲೇ ನೀಡಿರುವ ಅನುದಾನದ ಬಗ್ಗೆ ಕೂಡಾ ಆಡಿಟ್ ನಡೆಸಬೇಕಿದೆ.(ಒನ್ಇಂಡಿಯಾ ಸುದ್ದಿ)