ನವದೆಹಲಿ, ನವೆಂಬರ್ 23 : ಪ್ರಸ್ತುತ ಶ್ರೀಲಂಕಾ ಸರಣಿ ಬಳಿಕ ದಕ್ಷಿಣ ಆಫ್ರಿಕಾ ಸರಣಿ ನಿಯೋಜಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಲು ಸಾಲು ಸರಣಿಗಳಿಂದ ಬೇಸತ್ತಿರುವ ವಿರಾಟ್ ಕೊಹ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಬಿಸಿಸಿಐ ತಮಗೆ ಮನಬಂದಂತೆ ಸರಣಿ ನಿಯೋಜಿಸುತ್ತಿದೆ. ಇದರಿಂದ ಆಟಗಾರರಿಗೆ ಸ್ವಲ್ಪವೂ ಕೂಡ ವಿಶ್ರಾಂತಿ ಸಿಗುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಶ್ರೀಲಂಕಾ ಸರಣಿ ನಂತರ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ಕೇವಲ ಎರಡು ದಿನ ಮಾತ್ರ ಬಿಡುವು ನೀಡಿರುವುದು ದುರದೃಷ್ಟಕರ. ಬಿಸಿಸಿಐನ ಬ್ಯುಸಿ ಶೆಡ್ಯೂಲ್ ನಿಂದಾಗಿ ಆಟಗಾರರ ಮೇಲೆ ಪರಿಣಾಮ ಬೀರುತ್ತಿದೆ.
ಒಂದು ಸರಣಿಯಿಂದ ಮತ್ತೊಂದು ಸರಣಿಗೆ ಒಂದು ತಿಂಗಳಾದರೂ ಬಿಡುವು ಸಿಕ್ಕರೆ ಸೂಕ್ತ ತಯಾರಿ ಮಾಡಿಕೊಳ್ಳಬಹುದು ಎಂದರು. ವಿದೇಶೀ ಅಂಗಳದಲ್ಲಿ ಸರಣಿ ಆಯೋಜನೆ ಮಾಡುವಾಗ ಯೋಚನೆ ಮಾಡಿ ಪಂದ್ಯಗಳನ್ನು ನಿಯೋಜಿಸಬೇಕು.
ಈ ರೀತಿ ದಿಢೀರನೆ ಸರಣಿ ನಿಯೋಜಿಸುವುದರಿಂದ ಆಟಗಾರರಿಗೆ ಅಲ್ಲಿನ ಪರಿಸ್ಥಿತಿಗೆ ಒಗ್ಗುವುದು ತುಂಬಾ ಕಷ್ಟವಾಗುತ್ತದೆ. ಅಲ್ಲದೆ ವಿದೇಶಿ ನೆಲದಲ್ಲಿ ಆಡುವಾಗ ವಿಶೇಷ ತರಬೇತಿ ಕೂಡ ಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಲಂಕಾ ಸರಣಿ ಬಳಿಕ ಮೂರು ಟೆಸ್ಟ್, ಆರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಗೆ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಸುಮಾರು ಏನಿಲ್ಲವೆಂದರೂ ಎರಡು ತಿಂಗಳು ಕಾಲ ಈ ಮೂರು ಮಾದರಿಯ ಸರಣಿಗಳು ನಡೆಯಲಿವೆ. ಇದರಿಂದ ಕೊಹ್ಲಿ ಗರಂ ಆಗಿದ್ದು.