ಕೋಲ್ಕತಾ, ಜೂ.07: ಟೀಂ ಇಂಡಿಯಾದ ಮಾಜಿ ನಾಯಕ, 'ದಿ ವಾಲ್' ರಾಹುಲ್ ದ್ರಾವಿಡ್ ಅವರು ಭಾರತದ 'ಎ' ಹಾಗೂ ಅಂಡರ್-19 ತಂಡದ ಕೋಚ್ ಆಗಿ ಶನಿವಾರ ನೇಮಕಗೊಂಡಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಹೊಸ ಹುದ್ದೆ ಬಗ್ಗೆ ದ್ರಾವಿಡ್ ನೀಡಿದ ಪ್ರತಿಕ್ರಿಯೆ ಇಲ್ಲಿದೆ.
ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರಿದ್ದ ಬಿಸಿಸಿಐನ ಹೊಸ ಸಲಹಾ ಸಮಿತಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಕಚೇರಿಯಲ್ಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಹಾಗೂ ಠಾಕೂರ್ರನ್ನು ಭೇಟಿಯಾಗಿ ಮೊದಲ ಸಭೆ ನಡೆಸಿತು.[ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿಗೆ ಭರ್ಜರಿ ಉಡುಗೊರೆ]
ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ಅನುರಾಗ್ ಠಾಕೂರ್, ಭಾರತ 'ಎ' ಹಾಗೂ ಅಂಡರ್-19 ತಂಡಗಳಿಗೆ ಕೋಚ್ ಆಗಲು ದ್ರಾವಿಡ್ ಅವರು ಒಪ್ಪಿಕೊಂಡಿರುವುದು ತುಂಬಾ ಸಂತಸದ ವಿಷಯ. ಆದರೆ, ಟೀಮ್ ಇಂಡಿಯಾದ ಕೋಚ್ ಆಯ್ಕೆಯ ಕುರಿತು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಸರಣಿಯನ್ನು ಆಡುವುದು ನಮ್ಮ ಉದ್ದೇಶ. ಹೊಸ ತರಬೇತುದಾರರು ಹಾಗೂ ಫಿಜಿಯೋಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ ನಂತರ ತೆಂಡೂಲ್ಕರ್, ಗಂಗೂಲಿ, ಲಕ್ಷ್ಮಣ್ ಅವರಿರುವ ಸಲಹಾ ಸಮಿತಿಯ ಸಭೆ ಕರೆಯಲಿದ್ದೇವೆ ಎಂದು ಠಾಕೂರ್ ಹೇಳಿದರು. [ಬಿಸಿಸಿಐ ಟೀಂ ಸೇರಿದ ವಿವಿಎಸ್, ಗಂಗೂಲಿ, ತೆಂಡೂಲ್ಕರ್]
ದ್ರಾವಿಡ್ ಪ್ರತಿಕ್ರಿಯೆ: ತಮ್ಮ ವೃತ್ತಿ ಬದುಕಿನ ಹೊಸ ಇನ್ನಿಂಗ್ಸ್ ಬಗ್ಗೆ ಮಾತನಾಡಿದ 42 ವರ್ಷ ವಯಸ್ಸಿನ ರಾಹುಲ್ ದ್ರಾವಿಡ್ ಅವರು, ಯುವ ಕ್ರಿಕೆಟರ್ ಗಳ ಪ್ರತಿಭೆಯನ್ನು ಗುರುತಿಸಿ ಸರಿಯಾದ ಸಮಯಕ್ಕೆ ಸೂಕ್ತ ಅವಕಾಶ ನೀಡುವುದು ಬಹುದೊಡ್ಡ ಜವಾಬ್ದಾರಿ. ಈ ಹೊಸ ಹುದ್ದೆ ನಿಭಾಯಿಸಲು ನನಗೂ ಹೊಸ ಹುರುಪು ಬಂದಿದೆ. ಭಾರತದಲ್ಲಿ ಉತ್ತಮ ಪ್ರತಿಭಾವಂತರಿದ್ದಾರೆ ಅವರನ್ನು ಬೆಳೆಸಬೇಕಿದೆ ಎಂದಿದ್ದಾರೆ.
ದ್ರಾವಿಡ್ 164 ಟೆಸ್ಟ್ ಹಾಗೂ 344 ಏಕದಿನ ಪಂದ್ಯಗಳನ್ನು ಆಡಿದ್ದು 16 ವರ್ಷಗಳ ವೃತ್ತಿಜೀವನದಲ್ಲಿ ಒಟ್ಟು 24,208 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಲಹಾಕಾರರಾಗಿ ಕಾರ್ಯನಿರ್ವಹಿಸಿರುವ ದ್ರಾವಿಡ್ ಅವರು ಐಪಿಎಲ್ ನಲ್ಲಿ ನಾಯಕ, ಕೋಚ್ ಆಗಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಹಾಗೂ ಇತ್ತೀಚಿನ ಅಜಿಂಕ್ಯ ರಹಾನೆ ಫಾರ್ಮ್ ಕೂಡಾ ದ್ರಾವಿಡ್ ಅವರ ಸಲಹೆ ಸೂಚನೆ ಫಲ ಎಂಬುದನ್ನು ಮರೆಯುವಂತಿಲ್ಲ.
ಟೀಂ ಇಂಡಿಯಾ ಪೂರ್ಣಾವಧಿ ಕೋಚ್ ಆಗಲು ರಾಹುಲ್ ದ್ರಾವಿಡ್ ಹಿಂದೇಟು ಹಾಕುತ್ತಿದ್ದಾರೆ. ವೃತ್ತಿಜೀವನದಲ್ಲಿ ಹೆಚ್ಚಿನ ಸಮಯ ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ. ಕುಟುಂಬದೊಡನೆ ಹೆಚ್ಚಿನ ಕಾಲ ಕಳೆಯಲು ದ್ರಾವಿಡ್ ಅವರು ಬೇರೆ ಹುದ್ದೆ ಬಯಸಿದ್ದರು. ಹೀಗಾಗಿ, ಈ ಹೊಸ ಹುದ್ದೆ ದ್ರಾವಿಡ್ ಗೆ ನೀಡಲಾಗಿದೆ ಎಂಬ ಸುದ್ದಿ ಬಂದಿದೆ.