ಲಂಡನ್, ಜೂನ್ 03 : ಭಾರತ - ಪಾಕಿಸ್ತಾನ ಕ್ರಿಕೆಟ್ ಕದನವೆಂದರೆ ಸಾಕು ನರನಾಡಿಗಳಲ್ಲಿ ರಕ್ತ ಸಂಚಾರ ವೇಗ ಪಡೆಯುತ್ತದೆ, ಭಾರತ ತಂಡ ಪಾಕಿಸ್ತಾನವನ್ನು ಮತ್ತೊಮ್ಮೆ ಸದೆಬಡಿಯಬೇಕೆಂಬ ಹುಮ್ಮಸ್ಸು ನೂರ್ಮಡಿಯಾಗುತ್ತದೆ.
ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ತಾರಕಕ್ಕೇರುತ್ತಿರುವ ಈ ಸಂದರ್ಭದಲ್ಲಿ ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಎದುರಾಳಿಗಳ ಕದನ ಭಾರೀ ಕುತೂಹಲ ಕೆರಳಿಸಿದೆ. ಎಗ್ಬಸ್ಟನ್ ನಲ್ಲಿ ಭಾನುವಾರದಂದು, ಭಾರತೀಯ ಕಾಲಮಾನದ ಪ್ರಕಾರ 3 ಗಂಟೆಗೆ ಎರಡೂ ತಂಡಗಳು ಸೆಣಸಲಿವೆ.
ಸಹಜವಾಗಿ ಗೆಲುವು ನಮ್ಮದೇ ಆಗಬೇಕು ಎಂದು ಅಪ್ಪಟ ಭಾರತೀಯರು ಆಶಾಭಾವನೆಯಿಂದ ಎದುರುನೋಡುತ್ತಿದ್ದರೆ, ಹಸಿರು ಬಣ್ಣದ ದಿರಿಸು ಧರಿಸುವ ಪಾಕಿಸ್ತಾನ ತಂಡ ಕೂಡ ಗೆಲುವಿಗೆ ತಹತಹಿಸಲಿದೆ. ಆದರೆ, ಎರಡೂ ತಂಡಗಳ ಬಲಾಬಲ ಪರೀಕ್ಷಿಸಿದರೆ ಗೆಲುವು ಯಾರಿಗೆ ಲಭಿಸಲಿದೆ.
"ಹಿಂದಿನ ಇತಿಹಾಸ, ಇಂದಿನ ಬಲಾಬಲ ಪರಿಶೀಲನೆ ಮಾಡಿದರೆ ಭಾರತದ ಕೈಯೇ ಮೇಲಾಗುವ ಸಾಧ್ಯತೆಯಿದೆ. ಆದರೂ ಒಬ್ಬ ಪ್ಯಾಷನೇಟ್ ಪಾಕಿಸ್ತಾನಿಯಾಗಿ ಯಾವುದೇ ತಂಡದ ವಿರುದ್ಧ, ಅದರಲ್ಲೂ ಭಾರತದ ವಿರುದ್ಧ ಪಾಕಿಸ್ತಾನವೇ ಗೆಲ್ಲಬೇಕೆಂದು ಬಯಸುತ್ತೇನೆ" ಎಂದು ನುಡಿದಿದ್ದಾರೆ ಪಾಕ್ ಮಾಜಿ ಕ್ಯಾಪ್ಟನ್ ಶಾಹೀದ್ ಅಫ್ರೀದಿ.
ವಿರಾಟ್ ಕೊಹ್ಲಿ ನಾಯಕತ್ವದ ಭಾರತೀಯ ತಂಡದಲ್ಲಿ ಬಲಾಢ್ಯ ಬ್ಯಾಟ್ಸ್ ಮನ್ ಗಳಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಲೈನಪ್ ಹೊಂದಿದೆ. ಇವರು ಯಾವುದೇ ಬೌಲಿಂಗನ್ನು ಧೂಳಿಪಟ ಮಾಡಬಲ್ಲರು. ಇಂಥ ತಂಡದ ವಿರುದ್ಧ ಅತ್ಯುತ್ತಮ ತಂಡವನ್ನೇ ಇಳಿಸಬೇಕಾಗುತ್ತದೆ ಎಂದಿದ್ದಾರೆ ಬೂಮ್ ಬೂಮ್ ಅಫ್ರೀದಿ.
ಟಾಪ್ ಆರ್ಡರ್ ನಲ್ಲಿ ವಿರಾಟ್ ಕೊಹ್ಲಿ ಎಂಥ ಆಟ ಪ್ರದರ್ಶಿಸಬಲ್ಲರು ಎಂಬುದನ್ನು ಜಗತ್ತು ನೋಡಿದೆ. 2012ರ ಏಷ್ಯಾ ಕಪ್ ನಲ್ಲಿ ನಮ್ಮ ವಿರುದ್ಧ ಭರ್ಜರಿ ಸೆಂಚುರಿ ಗಳಿಸಿದ್ದು ಇನ್ನೂ ಹಸಿರಾಗಿದೆ, 2015ರಲ್ಲಿ ನಡೆದ ಐಸಿಸಿ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರನ್ನು ತಡೆಯುವವರೇ ಇರಲಿಲ್ಲ ಎಂದು ಅಫ್ರೀದಿ ಬಣ್ಣಿಸಿದ್ದಾರೆ.
ಕೊಹ್ಲಿ ವಿರುದ್ಧ ಬೌಲಿಂಗ್ ಮಾಡುವುದು ಎಂದಿಗೂ ಸವಾಲಿನದೇ. ಆರಂಭದಿಂದಲೇ ಅವರ ವಿರುದ್ಧ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶಿಸಬೇಕಾಗುತ್ತದೆ. ಪಾಕಿಸ್ತಾನ ಮೊದಲೇ ಅವರನ್ನು ಔಟ್ ಮಾಡಿದರೆ, ಭಾರತದವನ್ನು ಕಟ್ಟಿಹಾಕಲು ಅಪೂರ್ವ ಅವಕಾಶ ಪಾಕಿಸ್ತಾನಕ್ಕೆ ಸಿಕ್ಕಂತಾಗುತ್ತದೆ ಎಂದು ಅವರು ಅಭಿಪ್ರಾಯ ಮಂಡಿಸಿದ್ದಾರೆ.