ಲಂಡನ್, ಜೂನ್ 16: ಅನುಭವಿ ಆಟಗಾರ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಲಹೆಯೊಂದನ್ನು ತಕ್ಷಣಕ್ಕೆ ಅನುಷ್ಠಾನಕ್ಕೆ ತಂದಿದ್ದರಿಂದಲೇ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಜಯ ಗಳಿಸಲು ಸಾಧ್ಯವಾಗಿದ್ದು ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತ ತಂಡ, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ, ಮೊದಲು ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾದೇಶ ಆರಂಭಿಕ ಸೌಮ್ಯ ಸರ್ಕಾರ್ ಅವರನ್ನು ಬೇಗನೇ ಕಳೆದುಕೊಂಡಿತಾದರೂ, ಆನಂತರ ತಮೀಮ್ ಇಕ್ಬಾಲ್ ಹಾಗೂ ಮುಷ್ಫೀಕರ್ ರಹೀಮ್ ಜೋಡಿ, 3ನೇ ವಿಕೆಟ್ ಗೆ 121 ರನ್ ಜತೆಯಾಟ ನೀಡಿತು.
ಈ ಜೋಡಿ ಕ್ರೀಸ್ ನಲ್ಲಿ ನಿಂತು ಆರ್ಭಟಿಸುತ್ತಿದ್ದರೆ, ಲಂಡನ್ ನಲ್ಲಿನ ತಂಪು ಗಾಳಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾರತೀಯ ಬೌಲರ್ ಗಳಿಗೆ ಬೆವರಿಳಿಯುತ್ತಿತ್ತು. ಈ ಜೋಡಿಯನ್ನು ಮುರಿಯುವುದು ಭಾರತ ತಂಡಕ್ಕೆ ತಲೆನೋವಾಗಿತ್ತು.
ಆಗ, ಧೋನಿ ಅವರು ಕೊಹ್ಲಿಯನ್ನು ಕರೆದು ಸಲಹೆಯೊಂದನ್ನು ನೀಡಿದರಂತೆ. ಈ ಸಂದರ್ಭದಲ್ಲಿ ಆಫ್ ಸ್ಪಿನ್ನರ್ ಒಬ್ಬರನ್ನು ಕಣಕ್ಕಿಳಿಸಬೇಕು ಎಂದು ಹೇಳಿದರಂತೆ. ಅದರಂತೆ, ಕೇದಾರ್ ಜಾಧವ್ ಅವರಿಗೆ ಬೌಲಿಂಗ್ ಗೆ ಇಳಿಸಲಾಯಿತು. ಅವರು ಆ ಇಬ್ಬರೂ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಅಟ್ಟಿದರು. ಆನಂತರ, ಬಾಂಗ್ಲಾದೇಶ ಇನಿಂಗ್ಸ್ ಕ್ರಮೇಣ ಕುಸಿತ ಕಂಡಿತು.
ಹೀಗೆ, ಬಾಂಗ್ಲಾದೇಶವನ್ನು 300 ರನ್ ಮೊತ್ತದೊಳಗೇ ನಿಯಂತ್ರಿಸಲು ಧೋನಿ ನೀಡಿದ್ದ ಆ ಸಲಹೆಯೇ ಕಾರಣವೆಂದು ಖುದ್ದು ವಿರಾಟ್ ಕೊಹ್ಲಿಯವರೇ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.