ಕೊಚ್ಚಿ, ಮಾರ್ಚ್ 22 : ಕೇರಳ ವಿಧಾನ ಸಭೆ ಚುನಾವಣೆಯಲ್ಲಿ ಭಾರತದ ಕ್ರಿಕೆಟ್ ತಂಡ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಅವರು ಕಣಕ್ಕಿಳಿಯಲಿದ್ದಾರೆ.
ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಭಾರತೀಯ ಜನತಾ ಪಾರ್ಟಿ ಮುಂದಾಗಿದೆ. ಕ್ರಿಕೆಟ್ ಬಿಟ್ಟು ನಟನೆಯತ್ತ ಹೊರಳಿರುವ ಶ್ರೀಶಾಂತ್ ಅವರು ಕಣಕ್ಕಿಳಿಯುವ ಬಗ್ಗೆ ಸಮ್ಮತಿ ನೀಡಿದ್ದು, ಘೋಷಣೆಯಷ್ಟೇ ಬಾಕಿ ಉಳಿದಿದೆ.
ಎರ್ನಾಕುಲಂ ಜಿಲ್ಲೆಯ ತ್ರಿಪ್ಪುನಿತುರಾ ವಿಧಾನ ಸಭಾ ಕ್ಷೇತ್ರದಿಂದ ಶ್ರೀಶಾಂತ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ರಾಜಶೇಖರನ್ ಹೇಳಿದ್ದಾರೆ. [2019ರ ವಿಶ್ವಕಪ್ ತಂಡದಲ್ಲಿ ನಾನಿರಬೇಕು: ಶ್ರೀಶಾಂತ್]
ದೆಹಲಿಯಿಂದಲೂ ಬಿಜೆಪಿ ನಾಯಕರು ಶ್ರೀಶಾಂತ್ ಅವರನ್ನು ಸಂಪರ್ಕಿಸಿದ್ದಾರೆಂದು ಶ್ರೀಶಾಂತ್ ಕುಟುಂಬದ ಮೂಲಗಳು ತಿಳಿಸಿವೆ. ಆದರೆ, ಅವರು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತಮ್ಮ ನಿರ್ಧಾರವನ್ನು ಕೈಗೊಳ್ಳಲು ಕಾಲಾವಕಾಶವನ್ನು ಕೇಳಿದ್ದರು.[ಐಪಿಎಲ್ 6 ಸ್ಪಾಟ್ ಫಿಕ್ಸಿಂಗ್ : ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ]
ಒಂದು ವೇಳೆ ಶ್ರೀಶಾಂತ್ ಅವರು ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದರೆ ಅವರನ್ನು ಕಾಂಗ್ರೆಸ್ ನಾಯಕ ಅಬಕಾರಿ ಸಚಿವ ಕೆ. ಬಾಬು ಅವರ ವಿರುದ್ಧ ಕಣಕ್ಕಿಳಿಸಲಾಗುತ್ತದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿರುವ ಕೆ ಬಾಬು ಅವರು ಈ ಕ್ಷೇತ್ರದಲ್ಲಿ 1991ರಿಂದ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ.
ಶ್ರೀಶಾಂತ್ ಅವರು ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಎಂಬುದು ಇನ್ನೆರಡು ದಿನಗಳಲ್ಲಿ ತಿಳಿಸಲಾಗುವುದು ಎಂದು ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ತಿಳಿಸಿದ್ದಾರೆ.
ಶ್ರೀಶಾಂತ್ 2005 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಎಂಟ್ರಿ ಕೊಟ್ಟು ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ವಿವಾದಲ್ಲಿ ಸಿಲುಕಿಕೊಂಡು ತಮ್ಮ ಕ್ರಿಕೆಟ್ ಜೀವನವನ್ನ ಅಂತ್ಯಗೊಳಿಸಿ ಒಂದು ಸಿನಿಮಾದಲ್ಲೂ ನಟಿಸಿದ್ದರು. ಈಗ ರಾಜಕೀಯಕ್ಕೆ ಕ್ಷೇತ್ರಕ್ಕೆ ಇಳಿಯಲು ಮುಂದಾಗಿದ್ದಾರೆ. (ಪಿಟಿಐ)