ಸಿಡ್ನಿ, ಜ. 24 : ಟೀಂ ಇಂಡಿಯಾದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಅವರು ಮುಂಬರುವ ಟಿ20 ಸರಣಿಯಿಂದ ಹೊರಗುಳಿಯಬೇಕಾಗಿದೆ. ಗಾಯಾಳುವಾಗಿರುವ ಭುವನೇಶ್ವರ್ ಅವರ ಬದಲಿಗೆ ಆಲ್ ರೌಂಡರ್ ರಿಷಿ ಧವನ್ ಅವರನ್ನು ಉಳಿಸಿಕೊಳ್ಳಲಾಗುತ್ತಿದೆ ಎಂದು ಟೀಂ ಮ್ಯಾನೇಜ್ಮೆಂಟ್ ಪ್ರಕಟಿಸಿದೆ.
ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದ ನಂತರ ಭುವನೇಶ್ವರ್ ಕುಮಾರ್ ಅವರ ಅನುಪಸ್ಥಿತಿ ಬಗ್ಗೆ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಉತ್ತರಿಸಿದೆ. [ಟೀಂ ಇಂಡಿಯಾ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುವುದೇ?]
ಇದರ ಜೊತೆಗೆ ಕೈಗೆ ಗಾಯ ಮಾಡಿಕೊಂಡಿರುವ ಅಜಿಂಕ್ಯ ರಹಾನೆ ಅವರನ್ನು ಉಳಿಸಿಕೊಳ್ಳಲಾಗಿದ್ದು, ಅವರಿಗೆ ರಿಸರ್ವ್ ಪ್ಲೇಯರ್ ಆಗಿ ಗುರ್ ಕೀರತ್ ಸಿಂಗ್ ಮಾನ್ ತಂಡದಲ್ಲಿರಲಿದ್ದಾರೆ. ಕ್ಯಾನ್ ಬೆರಾ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ರಹಾನೆ ಕೈಗೆ ಗಾಯ ಮಾಡಿಕೊಂಡಿದ್ದರು.ಈಗ ಚೇತರಿಕೆ ಕಾಣುತ್ತಿದ್ದಾರೆ. ಆದರೆ, ಅಗತ್ಯ ಬಿದ್ದರೆ ಗುರ್ ಕೀರತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ.
ಅಡಿಲೇಡ್ ನಲ್ಲಿ ಜನವರಿ 26(ಮಂಗಳವಾರ) ರಿಂದ ಮೂರು ಟಿ20 ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಅವರು ಟಿ20 ತಂಡವನ್ನು ಸೇರಲಿದ್ದಾರೆ. ಎಂಎಸ್ ಧೋನಿ ಅವರು ನಾಯಕರಾಗಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಐದು ಏಕದಿನ ಪಂದ್ಯಗಳ ಸರಣಿಯನ್ನು ಭಾರತ 4-1 ಅಂತರದಿಂದ ಸೋತಿದೆ. ಟಿ 20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದರೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಬಹುದು. (ಒನ್ ಇಂಡಿಯಾ ಸುದ್ದಿ)