ಬೆಂಗಳೂರು, ಜುಲೈ 18: ಟೀಂ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಇಚ್ಛೆಯಂತೆ ಭರತ್ ಅರುಣ್ ಅವರನ್ನು ಬೌಲಿಂಗ್ ಕೋಚ್ ಹಾಗೂ ಆರ್ ಶ್ರೀಧರ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ(ಜುಲೈ 18) ದಂದು ಪ್ರಕಟಿಸಿದೆ.
ಜುಲೈ 21ರಂದು ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟೆಸ್ಟ್, ಐದು ಏಕದಿನ ಪಂದ್ಯ ಹಾಗೂ ಟಿ20 ಪಂದ್ಯಗಳನ್ನಾಡಲಿದೆ.
ಭರತ್ ಅರುಣ್ ಪರ ರವಿಶಾಸ್ತ್ರಿ ಬ್ಯಾಟಿಂಗ್ ಏಕೆ?
2014ರಲ್ಲಿ ಅಸ್ಟ್ರೇಲಿಯಾದ ಜೋ ಡಾಸ್ ಅವರು ಟೀಂ ಇಂಡಿಯಾದ ಬೌಲಿಂಗ್ ಕೋಚ್ ಸ್ಥಾನ ತೊರೆದ ಬಳಿಕ ಭರತ್ ಅರುಣ್ ಅವರು ಆ ಸ್ಥಾನವನ್ನು ತುಂಬಿದ್ದರು. 2016ರಲ್ಲಿ ಅನಿಲ್ ಕುಂಬ್ಳೆ ಅವರು ಕೋಚ್ ಆಗಿ ನೇಮಕವಾದ ಬಳಿಕ ಕೋಚಿಂಗ್ ತಂಡ ಬದಲಾಯಿತು.
ಭರತ್ ಅರುಣ್ ಅವರು ಕೋಚ್ ಆಗಿ ಉತ್ತಮ ಸಾಧನೆ ಮಾಡಿದ್ದಾರೆ.ಭರತ್ ಅರುಣ್ ಅವರ ತರಬೇತಿ ಪಡೆದ ಅಂಡರ್ 19 ಭಾರತ ತಂಡ 2012ರಲ್ಲಿ ವಿಶ್ವಕಪ್ ಗೆದ್ದಿದ್ದನ್ನು ಇಲ್ಲಿ ಮರೆಯುವಂತಿಲ್ಲ. 54 ವರ್ಷ ವಯಸ್ಸಿನ ಭರತ್ ಅವರುಆರ್ ಸಿಬಿಯ ಮುಖ್ಯ ಬೌಲಿಂಗ್ ಕೋಚ್ ಆಗಿದ್ದವರು. ದಕ್ಷಿಣ ಆಫ್ರಿಕಾದ ಬೌಲಿಂಗ್ ದಿಗ್ಗಜ ಅಲಾನ್ ಡೋನಾಲ್ಡ್ ಜೊತೆ ಕೂಡಿ ಆರ್ ಸಿಬಿ ಬೌಲರ್ ಗಳಿಗೆ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ.